ಚಾಮರಾಜನಗರ: ಉತ್ತಮವಾಗಿ ವ್ಯಾಪಾರ ವಹಿವಾಟು ಅಭಿವೃದ್ಧಿಪಡಿ-ಸುವ ನಿಟ್ಟಿನಲ್ಲಿ ನಗರ ಹೊರವಲಯದ ರೈಲು ಹಾಗೂ ಬಸ್ನಿಲ್ದಾಣದ ಸಮೀಪ 50 ಎಕರೆ ಪ್ರದೇಶದಲ್ಲಿ ನಗರಸಭೆಯಿಂದ ಮಳಿಗೆ ನಿರ್ಮಿಸಬೇಕು ಎಂದು ವರ್ತಕರ ಸಂಘ ಒತ್ತಾಯಿಸಿದೆ.
ನಗರದ ನಗರಸಭೆ ಕಚೇರಿಯಲ್ಲಿ ಈಚೆಗೆ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಅವರನ್ನು ಅಭಿನಂದಿಸಿ ವರ್ತಕರ ಸಂಘದ ಅಧ್ಯಕ್ಷ ವಿ. ಪ್ರಭಾಕರನ್, ನಿರ್ದೇಶಕರು ಜಿಲ್ಲಾ ಕೇಂದ್ರದ ಅಭಿವೃದ್ಧಿ, ವರ್ತಕರ ಸಮಸ್ಯೆ ಕುರಿತು ಚರ್ಚಿಸಿದರು.
ದೊಡ್ಡಅಂಗಡಿ ಬೀದಿ, ಚಿಕ್ಕಅಂಗಡಿ ಬೀದಿ, ಜೋಡಿರಸ್ತೆ ಹೊರತು ಪಡಿಸಿದರೆ ಉಳಿದೆಡೆ ಹೆಚ್ಚಿನ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಈ ಪ್ರದೇಶದಲ್ಲಿ ಜನಸಂದಣಿ, ವಾಹನಗಳ ಸಂಚಾರದಿಂದ ಕಿರಿಕಿರಿಯಾಗುತ್ತಿದೆ. ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆ ಮಾದರಿಯಲ್ಲಿ ಹೊರವಲಯದಲ್ಲಿ ನಗರಸಭೆಯಿಂದ ವ್ಯಾಪಾರ ಕೇಂದ್ರ ಸ್ಥಾಪಿಸಬೇಕು. ಇದರಿಂದ ನಗರದ ಅಭಿವೃದ್ಧಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ನಗರದಲ್ಲಿ ಶೌಚಾಲಯ, ಸ್ವಚ್ಛತೆ ಸಮಸ್ಯೆ ಇದೆ. ಗ್ರಾಮೀಣ ಪ್ರದೇಶದಿಂದ ಬರುವ ಮಹಿಳೆಯರು ಹಾಗೂ ರೈತರಿಗೆ ಹೆಚ್ಚಿನ ತೊಂದರೆ ಆಗುತ್ತಿದೆ. ಹೀಗಾಗಿ, ಹಳೆಯ ಮಾರುಕಟ್ಟೆ, ಪಟ್ಟಣ ಪೊಲೀಸ್ ಠಾಣೆ, ಭುವನೇಶ್ವರಿ ವೃತ್ತದಲ್ಲಿ ಶೌಚಾಲಯ ನಿರ್ಮಿಸಬೇಕು. ಫುಟ್ಪಾತ್ ತೆರವುಗೊಳಿಸಬೇಕು. ಚರಂಡಿ, ರಸ್ತೆ ಅಭಿವೃದ್ಧಿಪಡಿಸಬೇಕು ಎಂದರು.
ನಗರಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆ ಇದೆ. ಬೆಳಗಿನ ಜಾವ ಕಸ ವಿಲೇವಾರಿಯಾದ ನಂತರ ದೊಡ್ಡಂಗಡಿ ಬೀದಿಗಳಲ್ಲಿ ವರ್ತಕರು ಕಸ ಹಾಕುತ್ತಿದ್ದಾರೆ. ಹೀಗಾಗಿ, ಸ್ವಚ್ಛತೆ ಮಾಡಲು ತೊಂದರೆ ಆಗುತ್ತಿದೆ ಎಂದರು. ವರ್ತಕರು ಬೆಳಿಗ್ಗೆ ಪ್ಲಾಸ್ಟಿಕ್ ಚೀಲದಲ್ಲಿ ಕಸ ಸಂಗ್ರಹಿಸಿ ನಗರಸಭೆ ವಾಹನ ಬಂದಾಗ ನೀಡಬೇಕು. ಬಾಳೆಹಣ್ಣಿನ ವ್ಯಾಪಾರಿಗಳು ಎಲ್ಲೆಂದರಲ್ಲಿ ತ್ಯಾಜ್ಯ ಬೀಸಾಡದಂತೆ ಎಚ್ಚರಿಕೆ ನೀಡಿದ್ದೇವೆ. ಶೌಚಾಲಯ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗುತ್ತಿದೆ. ನಗರಸಭೆ ಕಾರ್ಯಕ್ರಮಗಳಿಗೆ ವರ್ತಕರು ಸಹಕಾರ ನೀಡಬೇಕು ಎಂದು ಕೋರಿದರು.
ಹಳೆ ಮಾರುಕಟ್ಟೆಯಲ್ಲಿ ವಾಹನಗಳ ನಿಲುಗಡೆಗೆ ಕ್ರಮವಹಿಸಲಾಗುವುದು. ಎಲ್ಐಸಿ ಕಚೇರಿ ಬಳಿ ಹಾದುಹೋಗುವ 60 ಅಡಿ ರಸ್ತೆ ಅಭಿವೃದ್ಧಿಪಡಿಸುವ ಮೂಲಕ ಕ್ರೀಡಾಂಗಣದತ್ತ ಸಾಗಲು ಉತ್ತಮ ರಸ್ತೆ ನಿರ್ಮಿಸಲಾಗುವುದು ಎಂದರು.ವರ್ತಕರ ಸಂಘದ ಖಜಾಂಚಿ ಪ್ರಭುರಾಂ, ಕಾರ್ಯದರ್ಶಿ ಚಿದಾನಂದ ಗಣೇಶ್, ಸಿ.ಎಸ್. ಪ್ರಭುಸ್ವಾಮಿ, ಶ್ರೀನಿವಾಸನ್, ಉದಯ, ಸೈಮನ್ ಡಿ ಸಿಲ್ವ, ಸಿ.ಎಸ್. ಮಹೇಶ್, ಸಿ.ಎ. ನಾರಾಯಣ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.