‘ಹಾಪ್ಕಾಮ್ಸ್ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಎರಡು ತಿಂಗಳ ಹಿಂದೆಯೇ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಆದರೆ, ಆಡಳಿತ ಮಂಡಳಿಯು ನಮ್ಮ ಬೇಡಿಕೆಯನ್ನು ಲಘುವಾಗಿ ಪರಿಗಣಿಸಿದೆ. ನಮ್ಮ ಬೇಡಿಕೆಗೆ ಸರಿಯಾದ ಸ್ಪಂದನೆ ಸಿಗದ ಕಾರಣ ಮುಷ್ಕರ ಅನಿವಾರ್ಯ ವಾಗಿದೆ’ ಎಂದು ಹಾಪ್ಕಾಮ್ಸ್ ನೌಕರರ ಸಂಘದ ಅಧ್ಯಕ್ಷ ಸಿ.ರಾಜಣ್ಣ ಹೇಳಿದರು.
‘ಹಾಪ್ಕಾಮ್ಸ್ನಲ್ಲಿ ಸುಮಾರು 900 ಮಂದಿ ನೌಕರರಿದ್ದಾರೆ. ನೌಕರರ ಸಮಸ್ಯೆಗಳಿಗೆ ಆಡಳಿತ ಮಂಡಳಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರತಿದಿನ 100 ಟನ್ ತರಕಾರಿ ಹಾಗೂ ಹಣ್ಣು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮಾರಾಟ ವಾಗುತ್ತದೆ. ಮುಷ್ಕರದಿಂದ ಇಂದು ಯಾವುದೇ ವಹಿವಾಟು ನಡೆದಿಲ್ಲ. ಇದರಿಂದ ₨ 15ರಿಂದ 20 ಲಕ್ಷ ನಷ್ಟವಾಗಿದೆ. ಈ ನಷ್ಟಕ್ಕೆ ಆಡಳಿತ ಮಂಡಳಿಯೇ ಹೊಣೆ’ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಹಾಪ್ ಕಾಮ್ಸ್ ಅಧ್ಯಕ್ಷೆ ಎಚ್.ಕೆ. ನಾಗವೇಣಿ, ‘ಸಹಕಾರ ಸಂಸ್ಥೆಗಳ ನಿಯಮದ ಪ್ರಕಾರ ಹಾಪ್ಕಾಮ್ಸ್ ನೌಕರರಿಗೆ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ಮಾಡಲು ಸಾಧ್ಯವಿಲ್ಲ. ಈ ವಿಷಯವನ್ನು ತಿಳಿಸಿದ್ದರೂ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದು ಸರಿಯಲ್ಲ’ ಎಂದರು. ಎಲ್ಲ ಮಳಿಗೆಗಳ ವಹಿವಾಟು ಸ್ಥಗಿತಗೊಂಡಿತ್ತು.