ಕೆರೂರ: ಹಲವು ದಿನಗಳಿಂದ ಚಿನಗುಂಡಿ ಪ್ಲಾಟ್ ಬಡಾವಣೆಗೆ ಸಮರ್ಪಕ ರೀತಿಯಲ್ಲಿ ಕುಡಿಯುವ ನೀರು ಪೂರೈಸದೆ ಪ.ಪಂ. ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಸ್ಥಳೀಯ ನೂರಾರು ನಾಗರಿಕರು, ಸ್ತ್ರೀಯರು ಕೂಡಲೇ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಪಟ್ಟಣ ಪಂಚಾಯಿತಿ ಕಾರ್ಯಾಲ ಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸುಮಾರು ಒಂದು ತಿಂಗಳಿನಿಂದ ತಮ್ಮ ಬಡಾವಣೆ ನಲ್ಲಿಗಳಿಗೆ ನೀರು ಬಂದಿಲ್ಲ. ಈ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ.ಪಂ. ಸಿಬ್ಬಂದಿ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ದೂರಿದರು.
‘ಕುಡಿಯುವ ನೀರಿಗೋಸ್ಕರ ಬಿಸಿಲು, ಮಳೆ ಲೆಕ್ಕಿಸದೆ ದೂರದ ಬೇರೆ ಬೇರೆ ಓಣಿವರೆಗೆ ಹೋಗಿ ಬಿಂದಿಗೆ ಹೊ ತ್ತು ತಂದೇ ಅಡುಗೆ ಮಾಡುವ ಸ್ಥಿತಿ ಇದೆ. ಕುಟುಂಬದಲ್ಲಿ ವೃದ್ಧರಷ್ಟೇ ಇದ್ದರಂತೂ ಅವರ ಪರಿಸ್ಥಿ ತಿ ದೇವರೇ ಬಲ್ಲ’ ಎಂದು ಅವರೆಲ್ಲ ಪತ್ರಕರ್ತರ ಮುಂದೆ ಅಳಲು ತೋಡಿಕೊಂಡರು.
ನಂತರ ಪ್ರತಿಭಟನೆ ಸ್ಥಳಕ್ಕೆ ಬಂದ ಮುಖ್ಯಾಧಿಕಾರಿ ಪಿ.ಎಂ. ಗುಡದಾರಿ, ಕೊಳವೆಬಾವಿ, ಇತರೆ ತಾಂತ್ರಿಕ ಅಡಚಣೆಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಈ ಕೂಡಲೇ ಸೂಕ್ತವಾಗಿ ನೀರು ಪೂರೈಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಹೋರಾಟ ನಿಲ್ಲಿಸಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಿ ಮತ್ತಿಕಟ್ಟಿ, ಕಮಲಾಕ್ಷಿ ಹಳಗೇರಿ, ಹುಸೇನಬೀ ಮಕಾನದಾರ, ಅನಿತಾ ರಾಠೋಡ, ಜಯ ಶ್ರೀ ರಡರಟ್ಟಿ, ರಾಮವ್ವ ದೊಡಮನಿ, ಸಬೀನಾ ಬೇಪಾರಿ, ಮಂಜುಳಾ ಪಾಟೀಲ, ಕಮಲವ್ವ ವಡ್ಡರ ಮುಂತಾದವರು ಪಾಲ್ಗೊಂಡಿದ್ದರು.
ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಮಳೆಗಾಲದಲ್ಲೂ ತಾಪತ್ರಯ ತಪ್ಪುತ್ತಿಲ್ಲ. ನಿತ್ಯ ದುಡಿದು ತಿನ್ನುವ ಬಡ ಕುಟುಂಬಗಳ ದುಸ್ಥಿತಿ ಹೇಳತೀರದು. ಈ ಸಮಸ್ಯೆ ಇತ್ಯರ್ಥಗೊಳಿಸಲು ಕೂಡಲೇ ಘಟಪ್ರಭಾ ನದಿಯಿಂದ ಕೊಳವೆ ಮಾರ್ಗದ ಮೂಲಕ ನೀರು ಪೂರೈಸುವ ಶಾಶ್ವತ ವ್ಯವಸ್ಥೆಗೆ ಮುಂದಾಗಬೇಕು ಎಂದು ಸಾರ್ವಜನಿಕರು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹಾಗೂ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಅವರನ್ನು ಒತ್ತಾಯಿಸಿದ್ದಾರೆ.