ಬೆಂಗಳೂರು: ಮೊದಲನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿರುವ ದಾರುಣ ಘಟನೆ ಗಂಗಮ್ಮನಗುಡಿಯ ಅಬ್ಬಿಗೆರೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಕೇಶವ ಮತ್ತು ಗೀತಾ ದಂಪತಿಯ ಪುತ್ರ ಆಕಾಶ್ ಮೃತಪಟ್ಟ ಮಗು. ಕೊಳಾಯಿ ಕೆಲಸ ಮಾಡುವ ಕೇಶವ ಅವರು ನೆಲ ಮಹಡಿಯಲ್ಲಿ ವಾಸವಿದ್ದಾರೆ. ಮೊದಲನೇ ಮಹಡಿಯಲ್ಲಿ ಇನ್ನೊಂದು ಕುಟುಂಬ ಇದೆ.
ಮಗುವನ್ನು ಎತ್ತಿಕೊಂಡು ಮೊದಲನೇ ಮಹಡಿಗೆ ಹೋದ ಗೀತಾ ಗೆಳತಿಯ ಜತೆ ಮಾತನಾಡುತ್ತಿದ್ದರು. ಈ ವೇಳೆ ತರಕಾರಿ ಗಾಡಿ ಬಂದಿದೆ. ಮಗುವನ್ನು ಮಹಡಿಯಲ್ಲೇ ಬಿಟ್ಟ ಅವರು ಗೆಳತಿಯ ಜತೆ ಕೆಳಗೆ ಹೋಗಿದ್ದಾರೆ. ತಾಯಿಯನ್ನು ನೋಡಲು ಆಕಾಶ್ ತಡೆಗೋಡೆಯಿಂದ ಬಗ್ಗಿ ನೋಡಿದಾಗ ಜಾರಿ ಬಿದ್ದಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಆಕಾಶ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗೆ ಮಗು ಮೃತಪಟ್ಟಿತ್ತು. ಎರಡು ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಯ ಒಬ್ಬನೇ ಮಗ ಆಕಾಶ್ ಎಂದು ಇನ್ಸ್ಪೆಕ್ಟರ್ ಎಚ್. ನಾಗರಾಜು ತಿಳಿಸಿದ್ದಾರೆ.
ಮಹಡಿಯ ತಡೆಗೋಡೆ ಸುಮಾರು ಎರಡೂವರೆ ಅಡಿ ಎತ್ತರ ಇದೆ. ಆದರೆ ಅದರ ವಿನ್ಯಾಸಕ್ಕಾಗ ಜಾಗ ಬಿಡಲಾಗಿದೆ ಎಂದು ಅವರು ಹೇಳಿದ್ದಾರೆ.