ಬೀದರ್: ಪರೀಕ್ಷಾ ಅಕ್ರಮದಲ್ಲಿ ಭಾಗಿ ಆಗಿರುವ ನರ್ಸಿಂಗ್ ಕಾಲೇಜುಗಳ ಮಾನ್ಯತೆ ರದ್ದುಪಡಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.
ನಗರದ ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ್ಯ ವಿ. ಧನಪಾಲ್ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನರ್ಸಿಂಗ್ ಕಾಲೇಜುಗಳು ಪರೀಕ್ಷಾ ಅಕ್ರಮ ನಡೆಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನೇ ಬುಡುಮೇಲು ಮಾಡುತ್ತಿವೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಈಚೆಗೆ ನಡೆದ ನರ್ಸಿಂಗ್ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಪತ್ತೆಯಾಗಿದೆ. ಹೀಗಾಗಿ ವ್ಯವಸ್ಥಿತವಾಗಿ ಮರುಪರೀಕ್ಷೆ ನಡೆಸಬೇಕು. ಅಕ್ರಮದಲ್ಲಿ ಶಾಮೀಲಾಗಿರುವ ನರ್ಸಿಂಗ್ ಕಾಲೇಜುಗಳ ಮಾನ್ಯತೆ ರದ್ದುಪಡಿಸಬೇಕು ಎಂದು ಗುಲ್ಬರ್ಗ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಶಾಂತ ಪವಾರ ಒತ್ತಾಯಿಸಿದರು.
ನೂರಾರು ವಿದ್ಯಾರ್ಥಿಗಳು ಸಹಿ ಹಾಕಿ ಅಭಿಯಾನಕ್ಕೆ ಬೆಂಬಲಿಸಿದರು. ಪರಿಷತ್ನ ಪ್ರಮುಖರಾದ ಪ್ರಶಾಂತ ಮಲ್ಕಾಪುರೆ, ರಾಹುಲ್ ಗಾದಾ, ಅಂಬರೀಷ ಬಟನಾಪುರೆ, ಸೋಮನಾಥ ಸ್ವಾಮಿ ಮತ್ತಿತರರು ನೇತೃತ್ವದ ವಹಿಸಿದ್ದರು.