ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಸಮೀಪ ಮಾವಿನ ತೋಟವೊಂದರಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮಾವಿನ ಮರಗಳು ಹೂ ಸಮೇತ ಭಸ್ಮವಾಗಿವೆ.
ತೋಟದಲ್ಲಿ ಕಾಚಿ ಮತ್ತಿತರ ಹುಲ್ಲು ಬೆಳೆದಿದ್ದು, ಮಧ್ಯಾಹ್ನದ ಹೊತ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿ ತೋಟದ ಎಲ್ಲ ಭಾಗಕ್ಕೂ ಹರಡಿದಾಗ ನಂದಿಸಲು ಮಾಡಿದ ಪ್ರಯತ್ನ ವಿಫಲವಾಯಿತು ಎಂದು ಪನಸಮಾಕನಹಳ್ಳಿ ಗ್ರಾಮದ ರೈತ ದಾಸರಿ ವೆಂಕಟೇಶಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಂಕಿ ರೆಡ್ಡೋಳ್ಳು ವೆಂಕಟೇಶರೆಡ್ಡಿ ಅವರ ತೋಟಕ್ಕೂ ಹರಡಿ ನೆಲ ಮಟ್ಟದಲ್ಲಿದ್ದ ಕೊಂಬೆಗಳು ಹಾಗೂ ಹೂ ಸುಟ್ಟು ಹೋಗಿದೆ.ಮರಗಳು ಈಗ ಹೂವಿನ ಹಂತದಲ್ಲಿದ್ದು, ಬೆಂಕಿ ಆಕಸ್ಮಿಕದಿಂದ ನಷ್ಟ ಉಂಟಾಗಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ.