ಸಂಡೂರು: ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಾಜದ ಕಟ್ಟಕಡೆಯ ಸ್ಥಾನದಲ್ಲಿ ಬದುಕುತ್ತಿರುವ ದೇವದಾಸಿ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎಂದು ದೇವದಾಸಿ ಮಹಿಳೆಯರ ವಿಮೋಚನ ಸಂಘದ ಜಿಲ್ಲಾ ಕಾರ್ಯದರ್ಶಿ ಅಡಿವೆಪ್ಪ ತಿಳಿಸಿದರು.
ತಾಲ್ಲೂಕಿನಲ್ಲಿರುವ ದೇವದಾಸಿ ಮಹಿಳೆಯರಿಗೆ ಕಳೆದ ಎಂಟು ತಿಂಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಸಾಶನ ಬಿಡುಗಡೆ ಮಾಡಿಲ್ಲ ಎಂದು ವಿರೋಧಿಸಿ ತಾಲ್ಲೂಕು ದೇವದಾಸಿ ಮಹಿಳೆಯರು ಕಛೇರಿ ಎದಿರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನಲ್ಲಿ 830 ದೇವದಾಸಿಯರಿಗೆ ತಿಂಗಳ ಮಾಸಾಶನ ಮಂಜೂರಾಗಿದ್ದು, ಕಳೆದ ಮಾರ್ಚ್ನಿಂದ ಇದುವರೆಗೆ ಬಡ ಮಹಿಳೆಗೆ ಸಿಗಬೇಕಾದ ಸಂಬಳ ಸಿಗುತ್ತಿಲ್ಲ. ಸಂಬಂಧ ಪಟ್ಟ ಇಲಾಖೆಗಳಿಗೆ ಅಲೆದಾಡಿ ಸಾಕಾಗಿದೆ. ನ್ಯಾಯ ಕೊಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿಯವರಿಗೆ ಸಂಘದ ಅಧ್ಯಕ್ಷೆ ದುರ್ಗಮ್ಮ ಮನವಿ ಮಾಡಿದರು.
`ನಾವು ಮಾರ್ಚ್ ತಿಂಗಳಿನಲ್ಲೇ ನಿಮ್ಮೆಲ್ಲರ ಸಂಬಳ ಮಾಡುವಂತೆ ದಾಖಲೆಗಳನ್ನು ನೀಡಿದ್ದೇನೆ. ಮೇಲಾಗಿ ಜಿಲ್ಲಾ ದೇವಾದಾಸಿ ಮಹಿಳೆಯರ ಯೋಜನಾಧಿಕಾರಿಗಳು ಅನುದಾನ ಲಭ್ಯ ಇರುವುದಿಲ್ಲ ಎಂಬುದಾಗಿ ಹಿಂಬರಹದ ಪತ್ರ ನೀಡಿದ್ದಾರೆ, ಅವರಿಂದ ನಮಗೆ ಸಕಾರಾತ್ಮಕ ಬೆಂಬಲ ಸಿಗುತ್ತಿಲ್ಲ ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಹಾಗೂ ನೊಂದ ಮಹಿಳೆಯರ ಮಾಸಾಶನವನ್ನು ಶ್ರೀಘ್ರದಲ್ಲೇ ಕೊಡಿಸಲಾಗವುದು~ ಎಂದು ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.
ನೌಕರರ ಸಂಘಕ್ಕೆ ಆಯ್ಕೆ
ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ನೌಕರರ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಿ. ಶಿವಕುಮಾರ ಹಾಗೂ ಉಪಾಧ್ಯಕ್ಷರಾಗಿ ಗೌಳಿ ಗಂಗಮ್ಮ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ನಿರ್ದೇಶಕರಾಗಿ ಅಶೋಕಕುಮಾರ ರಂಜೇರೆ, ಗ್ಯಾನಪ್ಪ ಬಡಿಗೇರ್, ಎಚ್.ಎಂ. ವಿರೂಪಾಕ್ಷಯ್ಯ, ಜಿ. ಬೋರಯ್ಯ, ಎಲ್.ನಾರಾಯಣ, ಎಫ್.ಡಿ. ನದಾಫ್, ಮಲ್ಲೇಶ ಆಯ್ಕೆಯಾಗಿದ್ದಾರೆ.