ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ‘ಬಾಲ ವಿಜ್ಞಾನಿಗಳು’

ಅಕ್ಷರ ಗಾತ್ರ

ಮೈಸೂರು: ರಾಷ್ಟ್ರೀಯ ವಿಜ್ಞಾನ ಸಮ್ಮೇಳನದ ಭಾಗವಾಗಿ ಸೆನೆಟ್ ಭವನದ ಬಳಿ ಆಯೋಜಿಸಿದ್ದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 5ರಿಂದ 12ನೇ ತರಗತಿ ಓದುತ್ತಿರುವ ಬಾಲ ವಿಜ್ಞಾನಿಗಳು ‘ಪ್ರತಿಭಾನ್ವಿತ ಭಾರತ’ವನ್ನೇ ಸೃಷ್ಟಿಸಿದ್ದರು.

ಅಲ್ಲಿ ಎತ್ತ ನೋಡಿದರತ್ತ ವಿವಿಧ ರಾಜ್ಯಗಳ ಮಕ್ಕಳ ಕಲರವ ಕಾಣುತ್ತಿತ್ತು. ಕೆಲವರು ತಾವು ಸಿದ್ಧಪಡಿಸಿದ ಮಾದರಿ, ಕೈಗೊಂಡ ಪ್ರಯೋಗಗಳ ಕುರಿತು ಉತ್ಸುಕತೆಯಿಂದ ವಿವರಿಸುತ್ತಿದ್ದರೆ, ವೀಕ್ಷಕರು ಅವರ ಮಾತಿಗೆ ಕಿವಿಯಾಗುತ್ತಿದ್ದರು.

ದೆಹಲಿ ಮೂಲದ ಈಶಾನ್ ಜೈನ್ ಸಿದ್ಧಪಡಿಸಿರುವ ಡೆಂಗಿ ನಿವಾರಣೆಗೆ ಆಯರ್ವೇದ ಔಷಧ ಕಿಟ್ ತಂದಿದ್ದರು. ಕಿಟ್‌ನಲ್ಲಿ ಸೊಳ್ಳೆ ನಿರೋಧಕ ಪೇಸ್ಟ್, ಪಪ್ಪಾಯಿ ಹಣ್ಣನ್ನು ಒಣಗಿಸಿ ತಯಾರಿಸಿದ ಔಷಧ, ಪಪ್ಪಾಯಿ ಬೀಜ ಹಾಗೂ ಚವನ್‌ಪ್ರಾಶ್‌ಗಳಿಂದ ತಯಾರಿಸಿದ್ದ ಮಾತ್ರೆಯಿತ್ತು. ಈ ಸಂಶೋಧನೆಗೆ ಪೇಟೆಂಟ್ ಕೂಡ ಪಡೆದಿರುವುದಾಗಿ ಅವರು ತಿಳಿಸಿದರು.

ಅಂಡಮಾನ್– ನಿಕೋಬಾರ್ ದ್ವೀಪದಿಂದ ಬಂದಿದ್ದ ಚಂಚಲ್ ಡೇ ಅವರು, ಸುನಾಮಿ ಸಂಭವಿಸಿದಾಗ ಜೀವರಕ್ಷಕವಾಗಿ ಬಳಸಬಹುದಾದ ಬಿದಿರಿನಿಂದ ತಯಾರಿಸಿದ ನೀರಿನ ಮೇಲೆ ತೇಲುವ ದುಂಡನೆಯ ತೆಪ್ಪಾಕಾರದ ‘ಎಸ್ಒಎಸ್’ (ಸೇವ್ ಯುವರ್ ಸೋಲ್) ಮಾದರಿ ಆಕರ್ಷಕವಾಗಿತ್ತು. ಮಾದರಿಯಲ್ಲಿ ಉಪ್ಪು ನೀರನ್ನು ಕುಡಿಯುವ ನೀರಾಗಿ ಬದಲಿಸುವ ಭಟ್ಟಿ ಇಳಿಸುವ ಸಾಧನ, ಪ್ರಥಮ ಚಿಕಿತ್ಸೆ ಸೌಕರ್ಯ ಅಳವಡಿಸಲಾಗಿತ್ತು.

ರಾಜಸ್ಥಾನದ ಸವಾಯ್‌ ಮಾಧವಪುರದಿಂದ ಬಂದಿದ್ದ ತರುಣ್ ಮುದ್ಗಲ್ ಅವರು ತಯಾರಿಸಿದ ನೀರನ್ನು ಬಳಸಿ ಕಾರ್ಯನಿರ್ವಹಿಸುವ ‘ಎಸ್ಕವೇಟರ್‌’ ಹೈಡ್ರಾಲಿಕ್ ಯಂತ್ರದ ಮಾದರಿಯಲ್ಲಿ ಕಬ್ಬಿಣದ ಬದಲು ಸ್ಟೇನ್‌ಲೆಸ್ ಸ್ಟೀಲ್ ಬಳಸಲಾಗಿದೆ. ಇದರಿಂದ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು. ಇದರಲ್ಲಿ ಕಚ್ಚಾತೈಲದ ಬದಲು ನೀರು ಬಳಸುವ ವ್ಯವಸ್ಥೆ ಇದೆ. ದೆಹಲಿಯ ನಬೀತ್ ಮಹಾಜನ ರೂಪಿಸಿದ ಹಿಗ್ಗುವ ಹಾಗೂ  ಕುಗ್ಗುವ ಕಾರು ಎಲ್ಲರ ಗಮನ ಸೆಳೆಯುತ್ತಿತ್ತು.

ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ, ಪ್ರಯಾಣಿಕರ ಸಂಖ್ಯೆ ನಿಯಂತ್ರಿಸಲು ಪರಿಣಾಮಕಾರಿ ಮಾದರಿ ಎನ್ನಿಸುವಂತಿತ್ತು. ಅಂಡಮಾನ್– ನಿಕೋಬಾರ್‌ದಿಂದ ಬಂದಿದ್ದ ಶುಭಾನಿ, ಕೃಷಿಯ ಮೇಲೆ ಆಗುತ್ತಿರುವ ಅತಿವೃಷ್ಟಿ ಹಾಗೂ  ಅನಾವೃಷ್ಟಿಯ ಪರಿಣಾಮವನ್ನು ತಡೆಯುವ ಅಧ್ಯಯನದ ವರದಿ ಕುರಿತು ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ಈ ಅಧ್ಯಯನ ವರದಿಗೆ ಕೇಂದ್ರ ಕೃಷಿ ಇಲಾಖೆಯ ಮಾನ್ಯತೆ ಲಭಿಸಿದೆ ಎಂಬ ಮಾಹಿತಿ ನೀಡಿದರು.

ಇವಲ್ಲದೆ, ದೆಹಲಿಯ ಹೃತಿಕ್ ಪಾಂಡೆ ಪ್ರಸ್ತುತಪಡಿಸಿದ ‘ಲೀನಿಯರ್ ವೇರಿಯಬಲ್’ ತಂತ್ರದ  ಮೂಲಕ ಕಾಡುಪ್ರಾಣಿಗಳ ಗಣತಿ ವಿಧಾನ, ಜಾರ್ಖಂಡ್‌ನ ದೀಪಿಕಾಕುಮಾರಿ ತಯಾರಿಸಿದ್ದ ವಿದ್ಯುತ್‌ರಹಿತ ಸೊಳ್ಳೆ ನಿಯಂತ್ರಕ ಯಂತ್ರ, ಕಾಸರಗೋಡಿನ ಅಪೂರ್ವಾ ಅವರ ಅಪಘಾತ ಹಾಗೂ ಬೆಂಕಿ ಸಂದರ್ಭದಲ್ಲಿ ತಂತಾನೇ ನಾಲ್ಕು ಬದಿಯಿಂದಲೂ ತೆರೆದುಕೊಳ್ಳುವ ಬಸ್, ಚಂಡಿಗಡದ ಶಿವಂ ಅವರ ನಿರುಪಯುಕ್ತ ಬಲ್ಬ್‌ಗಳನ್ನು ವೈಜ್ಞಾನಿಕವಾಗಿ ನಾಶಪಡಿಸುವ ಮಾದರಿ, ಅಸ್ಸಾಂನಿಂದ ಬಂದಿದ್ದ ನಿಕಿತಾ ಗೊಗೊಯ್ ಅವರ ಸಾಂಪ್ರದಾಯಿಕ ಆಹಾರ ಗಮನಸೆಳೆದವು. 

ಪ್ರದರ್ಶನದಲ್ಲಿ ಒಟ್ಟು 85 ಮಳಿಗೆಗಳಿದ್ದವು. ಉತ್ತರ ಭಾರತ ಮೂಲದ ಬಹುತೇಕ ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ, ದಕ್ಷಿಣ ಭಾರತದವರು ಇಂಗ್ಲಿಷಿನಲ್ಲಿ ವಿವರಣೆ ನೀಡುತ್ತಿದ್ದರು.
*
ವಿಜ್ಞಾನ ಸಮಾವೇಶವು ನನ್ನ ಜ್ಞಾನವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಇಂತಹ ಸಮಾವೇಶಗಳು ಭವಿಷ್ಯದ ವಿಜ್ಞಾನಿ, ತಂತ್ರಜ್ಞರನ್ನು ರೂಪಿಸುತ್ತವೆ.
-ತರುಣ್ ಮುದ್ಗಲ್ (9ನೇ ತರಗತಿ), ಸವಾಯ್‌ಮಾಧವಪುರ, ರಾಜಸ್ತಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT