ದಕ್ಷಿಣ ಭಾರತದ ಸಂಗೀತ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೇಡಿಯೋ ಮಿರ್ಚಿ 98.3 ಎಫ್ಎಂ ನೀಡುವ `ಮಿರ್ಚಿ ಮ್ಯೂಸಿಕ್ ಅವಾರ್ಡ್ ಸೌತ್'ನ ಜ್ಯೂರಿ ಸಮಿತಿ ಸಭೆ ಜು.9ರಂದು ಮಾರತ್ಹಳ್ಳಿಯಲ್ಲಿ ನಡೆಯಿತು.
ಸಮಾರಂಭದ ಕೊನೆಯ ಹಂತ ಜು. 26ರಂದು ಚೆನ್ನೈಯಲ್ಲಿ ನಡೆಯಲಿದೆ. 2012ರಲ್ಲಿ ಹೆಸರು ಮಾಡಿದ ದಕ್ಷಿಣ ಭಾರತದ ಸಂಗೀತ ಕಲಾವಿದರಿಗೆ ವಿವಿಧ ವಿಭಾಗಗಳಲ್ಲಿ 14 ಪ್ರಶಸ್ತಿಗಳನ್ನು ಗೆಲ್ಲುವ ಅವಕಾಶವಿದೆ. ರೇಡಿಯೊ ಕೇಳುಗರು ಆಯ್ಕೆ ಮಾಡುವ `ವರ್ಷದ ಅತ್ಯುತ್ತಮ ಹಾಡು' ಮತ್ತು `ವರ್ಷದ ಅತ್ಯುತ್ತಮ ಆಲ್ಬಮ್' ಪ್ರಶಸ್ತಿಯನ್ನು ಇಬ್ಬರಿಗೆ ನೀಡಲಾಗುತ್ತದೆ. ಎಲ್ಲಾ ವಿಭಾಗದ ಪ್ರಶಸ್ತಿಗಳನ್ನು ಕನ್ನಡ ಚಿತ್ರರಂಗದ ತೀರ್ಪುಗಾರರ ಸಮಿತಿ ಸದಸ್ಯರ ತಂಡ ಎರಡು ಹಂತದಲ್ಲಿ ಪರಿಶೀಲಿಸಿ ಆಯ್ಕೆ ಮಾಡುತ್ತದೆ.
ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲೂ ಪ್ರತ್ಯೇಕವಾದ ತೀರ್ಪುಗಾರರ ಸಮಿತಿ ಇದ್ದು, ಕನ್ನಡ ತೀರ್ಪುಗಾರರ ಸಮಿತಿಗೆ ಸಂಗೀತ ನಿರ್ದೇಶಕ ಹಂಸಲೇಖ ಮುಖ್ಯಸ್ಥರು. ತಮಿಳಿಗೆ ಗಂಗೈ ಅಮರನ್, ತೆಲುಗಿಗೆ ಸುರೇಶ್ ಬಾಬು, ಮಲಯಾಳಂಗೆ ಸಿಬಿ ಮಲೆಯಿಲ್ ಚೇರ್ಮನ್ ಆಗಿರುತ್ತಾರೆ.
`ಅರ್ನ್ಸ್ಟ್ ಅಂಡ್ ಯಂಗ್ ಇಂಡಿಯಾ' ಸಂಸ್ಥೆ ಪ್ರವೇಶಗಳ ಪರಿಶೀಲನೆ, ಅಂತಿಮ ಪಟ್ಟಿ ಹಾಗೂ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ನಿರ್ವಹಿಸಲಿದೆ ಎಂದು ರೇಡಿಯೋ ಮಿರ್ಚಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಪಾಂಡೆ ತಿಳಿಸಿದರು. ಜ್ಯೂರಿ ಸಮಿತಿಯ ಹಂಸಲೇಖಾ, ಗುರುಕಿರಣ್, ಹರಿಕೃಷ್ಣ, ಅರ್ಜುನ್ ಜನ್ಯಾ, ಕೆ.ಕಲ್ಯಾಣ್, ಮಂಜುಳಾ ಗುರುರಾಜ್, ಸುಮನ್ ಕಿತ್ತೂರು, ವಿ.ಮನೋಹರ್ ಮತ್ತು ಕವಿರಾಜ್ ಜ್ಯೂರಿ ಮೀಟ್ನಲ್ಲಿ ಹಾಜರಿದ್ದರು.
ಪ್ರಶಸ್ತಿಗಳ ಬಗ್ಗೆ ಹೆಚ್ಚಿನ ವಿವರ 98.3 ಎಫ್ಎಂನಲ್ಲಿ ಹಾಗೂ www.radiomirchi.com ನಲ್ಲಿ ಲಭ್ಯ.