ಪಟ್ನಾ (ಪಿಟಿಐ): `ಪ್ರತಿಯೊಬ್ಬರೂ ದೇಶದ ಋಣ ತೀರಿಸಬೇಕಿದೆ' ಎಂಬ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟೀಕಿಸಿರುವ ಜೆಡಿಯು, ರಾಜಕಾರಣಿಯೊಬ್ಬರು ಈ ರೀತಿ ಹೇಳಿಕೆ ನೀಡಿದಾಗ ಅದು ದೆಹಲಿ ಗದ್ದುಗೆ ಕುರಿತು ಅವರಿಗಿರುವ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದಿದೆ.
`2014ರ ಚುನಾವಣೆಯ ನಂತರ ದೆಹಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ನೋಡೋಣ. ಗುಜರಾತ್ಗೆ ಸೇವೆ ಸಲ್ಲಿಸುವ ಮೂಲಕವೂ ದೇಶಕ್ಕೆ ಸೇವೆ ಸಲ್ಲಿಸಬಹುದು. ನಿತೀಶ್ ಕುಮಾರ್ ಬಿಹಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ದೇಶಕ್ಕೂ ಸೇವೆ ಸಲ್ಲಿಸುತ್ತಿದ್ದಾರೆ' ಎಂದು ಜೆಡಿಯು ನಾಯಕ ಶಿವಾನಂದ ತಿವಾರಿ ಹೇಳಿದ್ದಾರೆ.
`ಅಧಿಕಾರ ಹೊಂದಿರುವ ಹಲವು ಜನ ದೇಶದ ಪ್ರಧಾನಿಯಾಗಲು ಇಚ್ಛಿಸುತ್ತಿದ್ದಾರೆ. ಎಲ್ಲರೂ ಆಶಾವಾದಿಗಳಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್ ಸಹ ಪ್ರಧಾನಿ ಹುದ್ದೆಯ ಕುರಿತು ತಮಗಿರುವ ಆಕಾಂಕ್ಷೆ ಹೇಳಿಕೊಂಡಿದ್ದಾರೆ' ಎಂದೂ ತಿವಾರಿ ಅಭಿಪ್ರಾಯ ಪಟ್ಟಿದ್ದಾರೆ.
ಎನ್ಡಿಎ ಪ್ರಧಾನಿ ಅಭ್ಯರ್ಥಿ ಜಾತ್ಯತೀತ ಹಿನ್ನೆಲೆಯವರಾಗಿರಬೇಕು ಹಾಗೂ ಸಮಾಜದ ಎಲ್ಲ ವರ್ಗಕ್ಕೂ ಸೇರಿದವರಾಗಿರಬೇಕು ಎಂಬ ಜೆಡಿಯು ನಿಲುವನ್ನು ಪುನರುಚ್ಚರಿಸಿದ ತಿವಾರಿ, ಎನ್ಡಿಎ ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ಪ್ರಕ್ರಿಯೆ ಆರಂಭಗೊಂಡಿಲ್ಲ ಎಂದು ತಿಳಿಸಿದ್ದಾರೆ.