ಮಂಗಳೂರು: ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆಯುತ್ತಿರುವ ಕೋಮುಗಲಭೆಯ ವಾಸ್ತವದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಲು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ನಿರ್ಧರಿಸಿದೆ.
ಮಂಗಳೂರಿನಲ್ಲಿ ನಡೆದ ಪಿಯುಸಿಎಲ್ನ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್, ‘ಮುಜಾಫರ್ನಗರಲ್ಲಿ 50ಕ್ಕೂ ಅಧಿಕ ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಕುಮ್ಮಕ್ಕಿನಿಂದ ನಡೆಯುತ್ತಿರುವ ಈ ಕೋಮಗಲಭೆ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ರಾಷ್ಟ್ರ ಮಟ್ಟದ ತಂಡವು ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ನಾಗರಿಕರ ವರದಿಯನ್ನು ಸಿದ್ಧಪಡಿಸಲಿದೆ’ ಎಂದರು.
‘ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಕ್ಕೆ ವಿರುದ್ಧವಾದ ಕರಾಳ ಕಾನೂನುಗಳು ದೇಶದಲ್ಲಿವೆ. ಕಾರ್ಪೊರೇಟ್ ವಲಯ, ಗಣಿಗಾರಿಕೆ, ಕೈಗಾರಿಕೆಗಳ ಹಿತಾಸಕ್ತಿ ಕಾಪಾಡಲು ಸರ್ಕಾರವೇ ಜನರ ವಿರುದ್ಧ ರಾಜದ್ರೋಹದಂತಹ ಕಾನೂನುಗಳನ್ನು ಬಳಸುತ್ತಿದೆ. ಈ ಕಾನೂನುಗಳನ್ನು ಬಳಸಿ, ನೈಸರ್ಗಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಪ್ರಜಾಪ್ರಭುತ್ವದ ಬೆನ್ನೆಲುಬಾದ ಪ್ರಶ್ನಿಸುವ ಅವಕಾಶವನ್ನೇ ಈ ಕಾನೂನುಗಳು ಕಿತ್ತುಕೊಂಡಿವೆ. ಈ ಕಾನೂನುಗಳನ್ನು ಕೈಬಿಡುವ ಹೋರಾಟವನ್ನು ಚುರುಕುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದರು.
‘ಆಹಾರ ಭದ್ರತಾ ಕಾಯ್ದೆಯು ಸುಪ್ರೀಂ ಕೋರ್ಟ್ ತೀರ್ಪಿನ ಆಶಯಕ್ಕೆ ಅನುಗುಣವಾಗಿಲ್ಲ. ರೈತ ಸಮುದಾಯದ ಹಿತಾಸಕ್ತಿಯನ್ನು ಇದು ಒಳಗೊಂಡಿಲ್ಲ. ಜನರಿಗೆ ಅಗತ್ಯವಿರುವಷ್ಟು ಪೌಷ್ಟಿಕ ಆಹಾರ ಒದಗಿಸುವುದನ್ನೂ ಇದು ಖಾತರಿ ಪಡಿಸುವುದಿಲ್ಲ ಎಂದರು.
ಪಿಯುಸಿಎಲ್ನ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಪ್ರಭಾಕರ ಸಿನ್ಹ, ಕವಿತಾ ಶ್ರೀವಾತ್ಸವ್, ಬಿನಾಯಕ್ ಸೆನ್, ರವಿಕಿರಣ್ ಜೈನ್, ರಾಜ್ಯ ಘಟಕದ ಅಧ್ಯಕ್ಷ ಪಿ.ಬಿ.ಡೆಸಾ ಉಪಸ್ಥಿತರಿದ್ದರು.