ಮೀರತ್/ಮುಜಾಫ್ಫರ್ ನಗರ:(ಪಿಟಿಐ) ಮುಜಾಫ್ಫರ್ ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಷಾಮೀಲಾದವರ ವಿರುದ್ಧ ಶನಿವಾರ ಕಾರ್ಯಚರಣೆ ಮುಂದುವರಿಸಿದ ಪೊಲೀಸರು ಪ್ರಚೋದನಕಾರಿ ಭಾಷಣ ಮಾಡಿ ಕೋಮುಗಲಭೆಗೆ ಉತ್ತೇಜನ ನೀಡಿದ ಆರೋಪದಲ್ಲಿ ಮತ್ತಿಬ್ಬರು ಶಾಸಕರನ್ನು ಬಂಧಿಸಿದರು.
ಬಿಜೆಪಿ ಶಾಸಕ ಸಂಗೀತ್ ಸೋಮ್ ಮತ್ತು ಬಿಎಸ್ಪಿ ಶಾಸಕ ನೂರ್ ಸಲೀಮ್ ರಾಣಾ ಈ ದಿನ ಪೊಲೀಸರಿಂದ ಬಂಧನಕ್ಕೆ ಒಳಗಾದರು. ಈ ಮಧ್ಯೆ ಗಲಭೆಗ್ರಸ್ತ ಪ್ರದೇಶಕ್ಕೆ ಭೇಟಿ ನೀಡದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ತಡೆದರು.
ಉತ್ತರ ಪ್ರದೇಶದ ಮುಜಾಫರ್ ನಗರ ಹಿಂಸಾಚಾರ ಪ್ರಚೋದಿಸಿ ಭಾಷಣ ಮಾಡಿದ ಬಿಜೆಪಿ ಶಾಸಕ ಸುರೇಶ ರಾಣಾ ಅವರನ್ನು ಲಖನೌದಲ್ಲಿ ಬಂಧಿಸಿದ ಒಂದು ದಿನದ ಬಳಿಕ ಪೊಲೀಸರು ಇತರ ಇಬ್ಬರು ಶಾಸಕರನ್ನು ಬಂಧಿಸಿದ್ದಾರೆ.
ಮೀರತ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಸೋಮ್ ಮತ್ತು ಮುಜಾಫ್ಫರ್ ನಗರದಲ್ಲಿ ಬಿಎಸ್ಪಿ ಶಾಸಕ ನೂರ್ ಸಲೀಮ್ ರಾಣಾ ಅವರನ್ನು ಬಂಧಿಸಿರುವುದಾಗಿ ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆರ್.ಕೆ. ವಿಶ್ವಕರ್ಮ ಪಿಟಿಐಗೆ ತಿಳಿಸಿದರು.