ನವದೆಹಲಿ (ಪಿಟಿಐ): ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಪ್ರಕರಣದಲ್ಲಿ ಆರು ವರ್ಷಗಳ ಹಿಂದೆ ದಾಖಲಿಸಿದ್ದ ಎಫ್ಐಆರ್ನ್ನು ಸಿಬಿಐ ಬರ್ಖಾಸ್ತುಗೊಳಿಸಿದೆ.
ಮುಲಾಯಂ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ದಾಖಲಿಸಿದ್ದ ಎಫ್ಐಆರ್ನ್ನು ಸಾಕ್ಷಿ– ಆಧಾರಗಳ ಕೊರತೆ ಹಿನ್ನೆಯಲ್ಲಿ ಬರ್ಖಾಸ್ತುಗೊಳಿಸಿರುವುದಾಗಿ ಸಿಬಿಐ ತಿಳಿಸಿದೆ. ಇದರಿಂದ ಮುಲಾಯಂ ಸಿಂಗ್ ಅವರು ನಿಟ್ಟುಸಿರು ಬಿಡುವಂತಾಗಿದೆ.
‘ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರ ಹೆಸರಿನಲ್ಲಿರುವ ಆದಾಯ, ಆಸ್ತಿ, ವೆಚ್ಚ ಇತ್ಯಾದಿಗಳನ್ನು ಪ್ರತ್ಯೇಕವೆಂದು ಪರಿಗಣಿಸಬೇಕು; ಅದನ್ನು ಮುಲಾಯಂ ಕುಟುಂಬದ ಇತರ ಸದಸ್ಯರ ಆದಾಯ, ಆಸ್ತಿಗಳಿಗೆ ಸೇರಿಸಬಾರದು’ ಎಂದು ಸುಪ್ರೀಂಕೋರ್ಟ್ ಡಿ.13ರಂದು ಆದೇಶಿಸಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೆಹಾಕಲಾಗಿದ್ದ ಪುರಾವೆಗಳಲ್ಲಿ ಕೆಲವನ್ನು ಕೈಬಿಡಬೇಕಾಯಿತು ಎಂದು ಸಿಬಿಐ ವಿವರಿಸಿದೆ.
‘ಈ ಪ್ರಕರಣ ಸೇರಿದಂತೆ ಪ್ರತಿಯೊಂದು ಪ್ರಕರಣದ ಬಗ್ಗೆಯೂ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಯಾವುದೇ ಕಾನೂನುಬದ್ಧ ಪರಿಶೀಲನೆಗೂ ಸಿದ್ಧರಿದ್ದೇವೆ’ ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹ
ಸಮರ್ಥಿಸಿಕೊಂಡಿದ್ದಾರೆ.