ಬಸವಕಲ್ಯಾಣ: ತಾಲ್ಲೂಕಿನ ಬೆಟಬಾಲ್ಕುಂದಾ ಗ್ರಾಮದ ಸುಹಾಸ ಕಾಂಬಳೆ, ಶಿಕ್ಷಕರಾದ ಬಗದೂರಿಯ ಮಾರುತಿ ಪೂಜಾರಿ ಹಾಗೂ ಮೋರಖಂಡಿಯ ಗೌತಮ ಇಂದ್ರಜೀತ ಅವರಿಗೆ ಈಚೆಗೆ ನಡೆದ ಗುಲ್ಬರ್ಗ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಕುಲಪತಿ ಪ್ರೊ.ಈ.ಟಿ.ಪುಟ್ಟಯ್ಯ ಅವರು ಪ್ರಮಾಣಪತ್ರ ವಿತರಿಸಿದರು.
ಸುಹಾಸ ಕಾಂಬಳೆ ಅವರು ಹಿಂದಿಯಲ್ಲಿ ‘ಉಪನ್ಯಾಸಕಾರ ಗೋವಿಂದ ಮಿಶ್ರಾ ಏಕ ಅಧ್ಯಯನ’ ಎಂಬ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ಮಾರುತಿ ಪೂಜಾರಿ ಅವರು ಮಂಡಿಸಿದ ‘ಟಿಪ್ಪುಸುಲ್ತಾನನ ಅವಧಿಯಲ್ಲಿ ಮೈಸೂರು ಆಡಳಿತ’ ಮತ್ತು ಗೌತಮ ಇಂದ್ರಜೀತ ಅವರ ‘ಯಶಪಾಲಕೆ ಉಪನ್ಯಾಸೋಮೇ ಚಿತ್ರೀತ ಸಮಸ್ಯಾಯೇ ಏಕ ಅಧ್ಯಯನ’ ಎಂಬ ವಿಷಯದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ದೊರೆತಿದೆ.
ಸಂತಸ: ಡಾಕ್ಟರೇಟ್ ಪಡೆದ ಈ ಮೂವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಇಲ್ಲಿನ ಅವರ ಬಂಧುಗಳು, ಮಿತ್ರರು ಘಟಿಕೋತ್ಸವದಲ್ಲಿ ಪಾಲ್ಗೊಂಡು ಸಂತಸ ಹಂಚಿಕೊಂಡರು ಹಾಗೂ ಅವರಿಗೆ ಪುಷ್ಪಮಾಲೆ, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶರಣಬಸವ ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲರೆಡ್ಡಿ ಕಿಟ್ಟಾ, ಉಪನ್ಯಾಸಕ ಜೈಶೇನಪ್ರಸಾದ ಮುಂತಾದವರು ಉಪಸ್ಥಿತರಿದ್ದರು.