ಮೇಲ್ಮನೆಯಲ್ಲಿ ಭಾಷಾ ಮಸೂದೆಯ ಅಂಗೀಕಾರ
ಬೆಂಗಳೂರು, ಸೆ. 21 – ಈಗಾಗಲೇ ವಿಧಾನ ಸಭೆಯಲ್ಲಿ ಅಂಗೀಕೃತವಾಗಿರುವ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಮಸೂದೆ ಇಂದು ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದಿಂದ ಅಂಗೀಕೃತವಾಯಿತು.
ಮೂರು ದಿನಗಳ ಕಾಲ ನಡೆದ ಚರ್ಚೆಗೆ ಉತ್ತರವಿತ್ತ ನ್ಯಾಯಾಂಗ ಹಾಗೂ ಅಬ್ಕಾರಿ ಸಚಿವ ಶ್ರೀ ಎಂ. ವಿ. ರಾಮರಾಯರು ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಪ್ರಯತ್ನದಲ್ಲಿ ಸರ್ಕಾರ ಪ್ರಥಮ ಹೆಜ್ಜೆಯನ್ನು ಇಟ್ಟಿದೆಯೆಂದು ತಿಳಿಸಿದರು.
ಮಸೂದೆಯನ್ನು ಪಾಸು ಮಾಡಿ ಸುಮ್ಮನೆ ಕುಳಿತುಕೊಳ್ಳಲು ಸರ್ಕಾರ ಇಚ್ಛಿಸುವುದಿಲ್ಲವೆಂದೂ, ಅದನ್ನು ಯಾವ ರೀತಿಯಲ್ಲಿ ಕಾರ್ಯಗತ ಮಾಡಬೇಕೆಂಬುದರ ಬಗ್ಗೆ ಯೋಚಿಸಿ ಕ್ರಮ ಕೈಗೊಳ್ಳುವುದೆಂದೂ ಶ್ರೀ ರಾಮರಾಯರು ಭರವಸೆ ನೀಡಿದರು.