ನವದೆಹಲಿ: ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನೇತೃತ್ವದಲ್ಲಿ ಚೇತರಿಸಿಕೊಳ್ಳುತ್ತಿರುವ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ನಲ್ಲಿ ಮೈತ್ರಿಕೂಟ ರೂಪಿಸುವ ವಿಚಾರದ ಚರ್ಚೆ ವೇಗ ಪಡೆದುಕೊಂಡಿದೆ.
ಕೇರಳ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿ ಕಾಂಗ್ರೆಸ್ ವಿವಿಧ ಪಕ್ಷಗಳೊಂದಿಗೆ ಈಗಾಗಲೇ ಮೈತ್ರಿ ಹೊಂದಿದೆ. ಬಿಹಾರ ಮತ್ತು ತಮಿಳು ನಾಡುಗಳಲ್ಲಿ ಕಾಂಗ್ರೆಸ್ ಬಹಳ ಬಲಿಷ್ಠವಾಗಿಯೇನೂ ಇಲ್ಲ. ಹಾಗಿದ್ದರೂ ಇರುವ ಬಲವನ್ನು ಉಳಿಸಿಕೊಳ್ಳುವುದಕ್ಕಾಗಿ ಮೈತ್ರಿಕೂಟದ ಬಗ್ಗೆ ಚಿಂತನೆ ನಡೆದಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಇಲ್ಲ ಎಂದು ಡಿಎಂಕೆ ಈಗಾಗಲೇ ಸ್ಪಷ್ಟಪಡಿಸಿದೆ. ಎಐಎಡಿಎಂಕೆಯೊಂದಿಗೆ ಒಂದು ಬಾರಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಹಾಗಾಗಿ ಈಗ ಕಾಂಗ್ರೆಸ್ಗೆ ಇರುವ ಅವಕಾಶ ಸೀಮಿತ. ನಟ ಕ್ಯಾಪ್ಟನ್ ವಿಜಯಕಾಂತ್ ಸ್ಥಾಪಿಸಿರುವ ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಜತೆಗಿನ ಮೈತ್ರಿಯ ಅವಕಾಶಗಳನ್ನು ಕಾಂಗ್ರೆಸ್ ವಿಶ್ಲೇಷಿಸುತ್ತಿದೆ.
ಬಿಹಾರದಲ್ಲಿ ಲಾಲು ಪ್ರಸಾದ್ ನೇತೃತ್ವದ ಆರ್ಜೆಡಿ ಮತ್ತು ರಾಮ್ವಿಲಾಸ್ ಪಾಸ್ವಾನ್ ನೇತೃತ್ವದ ಎಲ್ಜೆಪಿ ಜತೆ ಕಾಂಗ್ರೆಸ್ ಮೈತ್ರಿ ಖಚಿತವಾದಂತೆ ತೋರುತ್ತಿದೆ. ಆದರೆ ಇದಕ್ಕಿಂತ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಉತ್ತಮ ಮಿತ್ರ ಎಂಬುದು ಕಾಂಗ್ರೆಸ್ನ ಒಂದು ವರ್ಗದ ಅಭಿಪ್ರಾಯ. ಆದರೆ ಈ ಗುಂಪಿಗೆ ಅಲ್ಲಿ ಹೆಚ್ಚಿನ ಬೆಂಬಲ ಇಲ್ಲ.
ರಕ್ಷಣಾ ಸಚಿವ ಎ.ಕೆ.ಆಂಟನಿ ನೇತೃತ್ವದ ಸಮಿತಿಯು ಮೈತ್ರಿ ವಿಚಾರಗಳ ಪರಿಶೀಲನೆ ನಡೆಸುತ್ತಿದೆ. ಈ ಸಮಿತಿ ಹೈಕಮಾಂಡ್ಗೆ ವರದಿ ಸಲ್ಲಿಸಿದ ಬಳಿಕವಷ್ಟೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಅನುಕೂಲಕರ ಮಿತ್ರ ಪಕ್ಷಗಳ ಬಗ್ಗೆ ರಾಜ್ಯ ಘಟಕಗಳ ಜತೆ ಆಂಟನಿ ಸಮಾಲೋಚನೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಕೇರಳ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮಿತ್ರ ಪಕ್ಷಗಳ ವಿಷಯದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯತೆ ಇಲ್ಲ. ಸೀಟು ಹಂಚಿಕೆ ವಿಚಾರದಲ್ಲಿ ಮಾತ್ರ ಸಣ್ಣ ಪುಟ್ಟ ಬದಲಾವಣೆಗಳು ಆಗಬಹುದು.
ಕೇರಳದಲ್ಲಿ ಸಂಯುಕ್ತ ಪ್ರಜಾಸತ್ತಾತ್ಮಕ ರಂಗದ ನೇತೃತ್ವವನ್ನು ಕಾಂಗ್ರೆಸ್ ವಹಿಸಿದೆ. ಮಹಾರಾಷ್ಟ್ರದಲ್ಲಿ ಎನ್ಸಿಪಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಜಾರ್ಖಂಡ್ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಜತೆ ಕಾಂಗ್ರೆಸ್ ಮೈತ್ರಿ ಹೊಂದಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜತೆ ಯಾವುದೇ ಹೊಂದಾಣಿಕೆಗೆ ಅಲ್ಲಿನ ಕಾಂಗ್ರೆಸ್ ರಾಜ್ಯ ಘಟಕ ಸಿದ್ಧವಿಲ್ಲ. ಹಾಗಾಗಿ ಅಲ್ಲಿ ಕಾಂಗ್ರೆಸ್ಗೆ ಉಳಿದಿರುವುದು ಹಳೆಯ ಮಿತ್ರ ಎಡರಂಗ ಮಾತ್ರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.