ಅಕ್ಕಿಆಲೂರ: ಹೊಸ ಶೈಲಿಯ ಬದುಕಿನ ಒತ್ತಡಗಳಿಂದ ಜನಪದ ಸೊಗಡಿನ ಅನೇಕ ಕ್ರೀಡೆಗಳು ಮರೆಯಾಗುತ್ತಿವೆ. ಆಧುನಿಕತೆಯ ಪ್ರಭಾವದ ಇಂದಿನ ದಿನಗಳಲ್ಲಿಯೂ ಕೂಡ ಇಲ್ಲಿಗೆ ಸಮೀಪ ವಿರುವ ಹಿರೇಹುಲ್ಲಾಳ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನ ರೋಮಾಂಚನ ಕಾರಿ ಕ್ರೀಡೆಯೊಂದು ನಡೆಯುವ ಸಂಪ್ರದಾಯ ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದು ಈ ಕ್ರೀಡೆಯ ಸವಿಯನ್ನು ಕಣ್ತುಂಬಿಕೊಳ್ಳಲು ನೆರೆಯ ಜಿಲ್ಲೆಗಳ ಸಾವಿರಾರು ಸಂಖ್ಯೆಯ ಪ್ರೇಕ್ಷಕರು ಗುರು ವಾರ ಗ್ರಾಮಕ್ಕೆ ದೌಡಾಯಿಸಿದ್ದರು.
ಗ್ರಾಮದ ಗೇರಗುಡ್ಡ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇಲ್ಲಿ ಎತ್ತುಗಳಿಗೆ ಬಂಡಿಗಳನ್ನು ಕಟ್ಟಿ ಗುಡ್ಡದ ತುದಿಯ ಭಾಗದಲ್ಲಿರುವ ದೇವಸ್ಥಾನದ ವರೆಗೆ ಓಡಿಸಲಾಯಿತು. ಸುಮಾರು 200 ಮೀಟರ್ ಗಳಿಷ್ಟಿರುವ ಗುಡ್ಡ ವನ್ನು ಎತ್ತುಗಳು ಹತ್ತುವುದನ್ನು ನೋಡುವುದೇ ಕಣ್ಣಿಗೆ ಸೊಬಗು.
ಒಂದೆಡೆ ನೆತ್ತಿ ಸುಡುವ ಬಿಸಿಲಿದ್ದರೆ, ಮತ್ತೊಂದೆಡೆ ಬಿಸಿಲನ್ನೂ ಲೆಕ್ಕಿಸದೇ ಗುಡ್ಡದ ತುದಿ ಭಾಗಕ್ಕೆ ಬಂಡಿಯನ್ನು ಎಳೆದೊಯ್ಯುವ ಸಾಹಸಿ ಎತ್ತುಗಳು, ಇನ್ನೊಂದೆಡೆ ತದೇಕ ಚಿತ್ತದಿಂದ ಎತ್ತುಗಳ ಸಾಹಸ ವೀಕ್ಷಿಸುತ್ತಾ ಕೇಕೆ ಹಾಕುತ್ತಾ ಸಂಭ್ರಮದಿಂದ ನಲಿದಾಡು ತ್ತಿದ್ದುದು ಸಾಮಾನ್ಯವೆನಿಸಿತು. ಗುಡ್ಡದ ಕೆಳಭಾಗದಿಂದ ಮೇಲ್ಭಾಗದಲ್ಲಿರುವ ಬಸವೇಶ್ವರ ದೇವಸ್ಥಾನದ ಸನ್ನಿಧಿಗೆ ದಷ್ಟಪುಷ್ಟವಾದ ಎತ್ತುಗಳು ಬಂಡಿ ಗಳನ್ನು ಎಳೆದೊಯ್ದು ತಮ್ಮ ಸಾಹಸ ಪ್ರದರ್ಶಿಸಿದವು. ಈ ಸಂದರ್ಭದಲ್ಲಿ ಎತ್ತುಗಳ ಆರ್ಭಟ ಹಾಗೂ ಅವುಗಳ ಮಾಲೀಕರ ಸಂತಸಕ್ಕೆ ಪಾರವೇ ಇರಲಿಲ್ಲ.
ಈ ವಿಶಿಷ್ಟ ಸ್ಪರ್ಧೆಯಲ್ಲಿ ಹಿರೇ ಹುಲ್ಲಾಳ ಮಾತ್ರವಲ್ಲದೇ ಸುತ್ತಲಿನ ಹತ್ತಾರು ಗ್ರಾಮಗಳ ನೂರಾರು ಎತ್ತು ಗಳು ಪಾಲ್ಗೊಂಡು ಬಂಡಿ ಎಳೆಯುವಲ್ಲಿ ಯಶಸ್ವಿಯಾದವು. ಜನಮಾನಸದಿಂದ ಕಣ್ಮರೆಯಾಗುತ್ತಿರುವ ಜಾನಪದ ಸೊಗಡಿಗೆ ಈ ಸ್ಪರ್ಧೆ ಇನ್ನಷ್ಟು ಕಳೆ ತರು ವಲ್ಲಿ ಸಹಕಾರಿಯಾಗಿದೆ ಎನ್ನಬಹು ದಾಗಿದೆ. ಯುಗಾದಿ ಹಬ್ಬದ ದಿನದಂದು ನಡೆಯುವ ಎತ್ತು ಬಂಡಿ ಓಟ ಈ ಭಾಗ ದಲ್ಲಿ ಪ್ರಸಿದ್ಧಿ ಪಡೆಯುವ ಮೂಲಕ ಸಹಸ್ರಾರು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸುಂದರವಾಗಿ ಅಲಂಕರಿಸಿದ್ದ ಬಂಡಿ ಗಳನ್ನು ಎತ್ತುಗಳು ಗುಡ್ಡದಲ್ಲಿ ಒಂದೇ ಸಮನೆ ಧೂಳೆಬ್ಬಿಸುತ್ತಾ ಎಳೆದೊ ಯ್ಯುವ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿತ್ತು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಎತ್ತುಗಳು ಕೆಳಭಾಗ ದಿಂದ ಗುಡ್ಡದ ತುದಿ ಭಾಗಕ್ಕೆ ಬಂಡಿ ಗಳನ್ನು ಎಳೆದೊಯ್ದು ಅದ್ಭುತ ಸಾಹಸ ಪ್ರದರ್ಶಿಸಿ ರಂಜಿಸಿದವು. ಎತ್ತುಗಳು ಅಡ್ಡಾದಿಡ್ಡಿಯಾಗಿ ಓಡುವ ಪರಿಯನ್ನು ಗಮನಿಸಿದರೆ ಬಂಡಿಗಳನ್ನು ಎಲ್ಲಿ ಎಳೆದೊಯ್ದು ಬಿಸಾಕುತ್ತವೋ ಎಂಬ ಆತಂಕ ಅಲ್ಲಿ ಸೃಷ್ಟಿಯಾಗಿತ್ತು. ಆದರೆ ಆತಂಕದ ನಡುವೆಯೂ ಎತ್ತುಗಳ ಸಾಹಸ ಪ್ರದರ್ಶನ ನೆರೆದವರಲ್ಲಿ ಬೆರಗು ಮೂಡಿಸಿತು. ಎತ್ತುಗಳ ಸಾಹಸ ಕಂಡ ನೆರೆದವರು ಇಲ್ಲಿ ಹುಚ್ಚೆದ್ದು ಕುಣಿದರು.
ಎತ್ತುಗಳ ಮಾಲೀಕ ಕೈಸನ್ನೆ ಮಾಡಿ ಸಿಟಿ ಹೊಡೆದು ಕೇಹೋ ಎಂದ ಬಳಿಕವೇ ಓಟಕ್ಕೆ ನಿಲ್ಲುವ ಎತ್ತುಗಳು ಇಲ್ಲಿ ವಿಶೇಷವಾಗಿ ಗಮನ ಸೆಳೆದವು. ಛಲದಂಕ ಮಲ್ಲನಂತೆ ಒಂದೇ ಸಮನೆ ಹೆಜ್ಜೆ ಹಾಕಿ ಗುರಿ ತಪುಲುವಲ್ಲಿ ಎತ್ತು ಗಳು ಯಶಸ್ವಿಯಾಗಿ ಮನರಂಜನೆಯ ಹಬ್ಬದೂಟ ಬಡಿಸಿದರೆ ಕೆಲವು ಎತ್ತು ಗಳು ಓಡಲು ಹಿಂದೇಟು ಹಾಕಿದರೆ ಸಿಳ್ಳೆ ಹೊಡೆದು, ಛಾಟಿ ಏಟು ನೀಡಿ ಅವು ಓಡುವಂತೆ ಹುರಿದುಂಬಿಸುವ ದೃಶ್ಯ ಸಾಮಾನ್ಯವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.