ವಿಜಾಪುರ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇಲ್ಲಿಯ ಜೋರಾಪುರ ಪೇಟೆಯಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಸ್ಥಳೀಯ ಶಾಹುನಗರದ ಶಿವಶಕ್ತಿ ಗ್ರೂಪ್ ತಂಡ ಪ್ರಥಮ ಬಹುಮಾನ ಪಡೆಯಿತು.
ಶ್ರೀಶಕ್ತಿ ತರುಣ ಸಂಘ ಹಾಗೂ ಎ.ಪಿ. ಗ್ರೂಪ್ನಿಂದ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ನಗರದ ಫ್ರೆಂಡ್ಸ್ ಗ್ರೂಪ್, ಬಂಜಾರಾ ಗ್ರೂಪ್, ಶಿವಶಕ್ತಿ ಗ್ರೂಪ್, ಮೆಂಟಲ್ ಫ್ರೆಂಡ್ಸ್ ಗ್ರೂಪ್, ದುರ್ಗಾ ದೇವಿ ತರುಣ ಸಂಘ, ಶಿವರಾಯ ಮರಾಠ ಸೇನೆ, ಪ್ರತಾಪ್ ಲೋಹಾರ ತಂಡಗಳು ಪಾಲ್ಗೊಂಡಿದ್ದವು.
ಪ್ರಥಮ ಅವಕಾಶದಲ್ಲಿ ಯಾವ ತಂಡವೂ ಮೊಸರು ಗಡಿಗೆ ಒಡೆಯಲಿಲ್ಲ. ಎರಡನೇ ಅವಕಾಶದಲ್ಲಿ ಶಿವಶಕ್ತಿ ಗ್ರೂಪ್ ಮೊಸರು ಗಡಿಗೆ ಒಡೆಯುವಲ್ಲಿ ಯಶಸ್ವಿ ಯಾಯಿತು. ಈ ತಂಡದವರಿಗೆ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ರೂ.25, 000 ನಗದು ಬಹುಮಾನ ನೀಡಿದರು.
ಶ್ರಿಶಕ್ತಿ ತರುಣ ಸಂಘದ ಅಧ್ಯಕ್ಷ ಅಶೋಕ ಶಿರೋಳಕರ, ಕಾರ್ಯದರ್ಶಿ ಭೀಮಶಿ ಬನ್ನೂರ, ಉಪಾಧ್ಯಕ್ಷ ಬಸಯ್ಯ ಹಿರೇಮಠ, ಎ.ಎಸ್.ಪಿ. ಚೇತನ ಈರಣ್ಣ ಪಟ್ಟಣಶೆಟ್ಟಿ, ಸಂತೋಷ ಕವಾಲ್ದಾರ ಇತರರು ಪಾಲ್ಗೊಂಡಿದ್ದರು.