ಅಹಮದಾಬಾದ್, (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆಸಿದ `ಸದ್ಭಾವನಾ ಉಪವಾಸ~ಕ್ಕೆ ಪ್ರತಿಯಾಗಿ ಸಬರಮತಿ ಆಶ್ರಮದ ಬಳಿ ಕೈಗೊಂಡಿದ್ದ ಉಪವಾಸವನ್ನು ಕಾಂಗ್ರೆಸ್ ಮುಖಂಡರಾದ ಶಂಕರ್ ಸಿಂಗ್ ವಘೇಲ ಮತ್ತು ಅರ್ಜುನ್ ಮೋದಾವಾಡಿಯಾ ಮಂಗಳವಾರ ಅಂತ್ಯಗೊಳಿಸಿದರು.
ನೂರಾರು ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ದಲಿತ ಬಾಲಕಿಯರು ನೀಡಿದ ಹಣ್ಣಿನ ರಸವನ್ನು ಕುಡಿದ ಬಳಿಕ ಮಾತನಾಡಿದ ಅವರು, ತಮ್ಮ ಉಪವಾಸವು ಮೋದಿ ಅವರ ಉಪವಾಸದ ಕಪಟತನವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
ತಮ್ಮ ಉಪವಾಸವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ ವಘೇಲ, ತಾವು ಅದಕ್ಕೆ ಪಕ್ಷದ ಹೈಕಮಾಂಡ್ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಒತ್ತಿ ಹೇಳಿದರು.
ಮೋದಿ ಅವರ ಉಪವಾಸ ವೇದಿಕೆಯಲ್ಲಿ ಬಿಜೆಪಿ ನಾಯಕರು ಕಾಣಿಸಿಕೊಂಡು ನಾಟಕವಾಡಿದಂತೆ ನಮ್ಮದು ನಾಟಕದ ವೇದಿಕೆಯಾಗಿರಲಿಲ್ಲ ಎಂದ ಅವರು, ಮೋದಿ ಸರ್ಕಾರದ `ದುರ್ಭಾವನೆ~ಯನ್ನು ಹೊರಗೆಳೆಯುವುದಾಗಿ ಹೇಳಿದರು. ಮೋದಿ ಅವರು ಮಾಡಿದಷ್ಟು ಪಾಪವನ್ನು ದೇಶದ ಇತರ ಯಾವುದೇ ಮುಖ್ಯಮಂತ್ರಿ ಮಾಡಿರಲು ಸಾಧ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮೋದಾವಾಡಿಯಾ ಹೇಳಿದರು.
ಹಿಂದಿನ ಹಿರಿಯ ಬಿಜೆಪಿ ಮುಖಂಡರ ಈಗಿನ ಪರಿಸ್ಥಿತಿಯನ್ನು ನೋಡಿ. ಬಿಜೆಪಿ ನಾಯಕ ಹರೇನ್ ಪಾಂಡ್ಯ ಅವರ ಹತ್ಯೆ ನಡೆಸಲಾಯಿತು. ಅಲ್ಲದೆ ಅವರ ವಿಧವೆ ಪತ್ನಿಗೆ ತಮ್ಮ ಅಳಲು ತೋಡಿಕೊಳ್ಳಲು ಮೋದಿ ಉಪವಾಸದ ಸಂದರ್ಭದಲ್ಲಿ ಅನುಮತಿ ನೀಡಲಿಲ್ಲ ಎಂದು ಟೀಕಿಸಿದರು.