ಆನೇಕಲ್: ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾದುದು ಎಂದು ತಹಶೀಲ್ದಾರ್ ಎಚ್.ಎನ್.ಶಿವೇಗೌಡ ನುಡಿದರು.
ಅವರು ಪಟ್ಟಣದ ಗಜಶಿಲಾ ಗಂಗೋತ್ರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿಕ್ಷಣವು ಕೇವಲ ಪಠ್ಯವಿಷಯಕ್ಕೆ ಸೀಮಿತಗೊಳ್ಳದೆ ಮಾನವೀಯ ಮೌಲ್ಯಗಳನ್ನು ತಿಳಿಸಿ ಮನಷ್ಯ ತನ್ನ ಬದುಕನ್ನು ಹೇಗೆ ಮಾಡಬೇಕು ಸಂಘ ಜೀವಿಯಾಗಿ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡುವಂತಹ ನೈತಿಕ ಶಿಕ್ಷಣ ಅವಶ್ಯಕವಾಗಿದೆ ಎಂದು ಹೇಳಿದರು.
ದೊಡ್ಡಬಳ್ಳಾಪುರದ ತಪಸೀಹಳ್ಳಿಯ ಪುಷ್ಪಾಂಡಜ ಮುನಿ ಆಶ್ರಮದ ದಿವ್ಯ ಜ್ಞಾನಾಂದಗಿರಿ ಸ್ವಾಮೀಜಿ ಅವರು ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ಏಳು ಬೀಳು ಸಹಜ. ಬಿದ್ದಾಗ ಕುಂದದೇ ಛಲದಿಂದ ಕಾರ್ಯ ಸಾಧನೆ ಮಾಡಿ ಜೀವನವನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ನುಡಿದರು.
ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಿ ಅವರ ಶಿಕ್ಷಣವನ್ನು ಪೂರೈಸುವ ನಿಟ್ಟಿನಲ್ಲಿ ಸಹಕಾರ ಕೊಡ ಬೇಕು, ಮಗುವಿನ ಭವಿಷ್ಯವು ಶಿಕ್ಷಣದಲ್ಲಿ ಅಡಗಿರುವುದರಿಂದ ಉತ್ತಮ ಶಿಕ್ಷಣವನ್ನು ನೀಡಲು ಮುಂದಾಗ ಬೇಕು ಎಂದು ಹೇಳಿದರು.
ಕರ್ನಾಟಕ ಜನಾಂದೋಲನಾ ಸಂಘಟನೆಯ ಕಾರ್ಯದರ್ಶಿ ಆದೂರು ಪ್ರಕಾಶ್ ಮಾತನಾಡಿ, ಸಮಾಜ ಮುಖಿ ಶಿಕ್ಷಣವನ್ನು ಪಡೆದು ಜೀವನದಲ್ಲಿ ಉತ್ತಮ ಧ್ಯೇಯ, ಗುರಿಗಳನ್ನು ಹೊಂದಬೇಕು ಎಂದು ಹೇಳಿದರು.
ಎಲೈಟ್ ಅಕಾಡೆಮಿಯ ಜಿ. ಮುನಿರಾಜು ಮಾತನಾಡಿ, ಜೀವನ ಸಾರ್ಥಕತೆ ಶಿಕ್ಷಣದಲ್ಲಿ ಅಡಗಿದ್ದು, ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಸಂಸ್ಥಾಪಕ ಓಂಕಾರ ಪ್ರಿಯ ಬಾಗೇಪಲ್ಲಿ , ದೊಡ್ಡಬಳ್ಳಾಪುರದ ನೀರು ಮತ್ತು ನೈರ್ಮಲ್ಯ ತಜ್ಞ ಕೆ. ಗುರದೇವ್, ಜ್ಞಾನ ಜ್ಯೋತಿಯ ಪಾದ್ರಿ ಅನಿಲ್ ಡಿ. ಮೆಲ್ಲೊ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ. ರಾಮಮೂರ್ತಿ ಮತ್ತಿತರರು ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷೆ ಉಮಾಗೋಪಿ, ಕಾಂಗ್ರೆಸ್ ಮುಖಂಡ ಬಿ.ಪಿ. ರಮೇಶ್, ಸಂಸ್ಥೆಯ ಅಧ್ಯಕ್ಷ ಶಿವಶಂಕರ ಶಾಸ್ತ್ರಿ ಹಾಜರಿದ್ದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.