ನವದೆಹಲಿ: ವಿಶ್ವವಿಖ್ಯಾತ ಮ್ಯಾಂಡೋಲಿನ್ ವಾದಕ ಯು. ಶ್ರೀನಿವಾಸ್ ಅವರು ಪತ್ನಿ ಶ್ರೀ ಅವರಿಂದ ಪಡೆದುಕೊಂಡ ವಿಚ್ಛೇದನಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಅಂತಿಮ ಮೊಹರು ಒತ್ತಿದೆ.ಶ್ರೀನಿವಾಸ್ 1994ರ ನ. 19ರಂದು ಐಎಎಸ್ ಅಧಿಕಾರಿಯೊಬ್ಬರ ಮಗಳು, ವೀಣಾ ವಾದಕಿ ಶ್ರೀ ಅವರನ್ನು ಮದುವೆಯಾಗಿದ್ದರು.
ದಂಪತಿಗೆ ವಿಚ್ಛೇದನ ನೀಡಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಹಾಗೂ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿದೆ. ಪತ್ನಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಕಾರಣ ನೀಡಿ ಶ್ರೀನಿವಾಸ್ ವಿಚ್ಛೇದನ ಪಡೆದುಕೊಂಡಿದ್ದರು.
ಶ್ರೀ ಅವರು ತಮ್ಮ ಮಕ್ಕಳೊಂದಿಗೆ ಕಳೆದ 16 ವರ್ಷಗಳಿಂದ ಹೈದರಾಬಾದ್ನಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ.