ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಚುವಲ್ ಫಂಡ್: ಬದಲಾವಣೆಯ ಗಾಳಿ

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಈಚೆಗೆ ದೇಶದ ಮ್ಯೂಚುವಲ್ ಫಂಡ್ (ಎಫ್‌ಎಂ) ರಂಗದಲ್ಲಿ ಪಿಂಚಣಿ ಉತ್ಪನ್ನಗಳ ಆರಂಭ ಸಹಿತ ಭಾರಿ  ಬದಲಾವಣೆ  ಮತ್ತು ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ.

ಇಂತಹ ಬದಲಾವಣೆಯ ಗಾಳಿ ಬೀಸಲು ಆಸ್ತಿ ನಿರ್ವಹಣಾ ಕಂಪೆನಿಗಳು (ಎಎಂಸಿ) ಭಾರಿ ಪ್ರಯತ್ನ ನಡೆಸಿರುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. `ಸೆಬಿ~ಯ ಈ ಕ್ರಮದಿಂದ ಪಿಂಚಣಿ ಉತ್ಪನ್ನಗಳ ಎಲ್ಲ ಒಳ ಹೊರಗನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಜತೆಗೆ `ಎಎಂಸಿ~ಗಳಿಗೆ ಸುಸ್ಥಿರ ಹೂಡಿಕೆಯ ಅವಕಾಶ ದೊರೆಯಲಿದೆ.

ಸದ್ಯಕ್ಕೆ ಮ್ಯೂಚುವಲ್ ಫಂಡ್‌ಗಳು ವೈವಿಧ್ಯಮಯ ಲಾಭ ತಂದುಕೊಡುತ್ತ್ದ್ದಿದು, ಹೊಸ ವ್ಯವಸ್ಥೆಯಿಂದ ದೀರ್ಘಾವಧಿಯ ಹೂಡಿಕೆ ಮಾಡುವವರಿಗೆ ತಮ್ಮ ನಿವೃತ್ತಿಯ ಸಮಯಕ್ಕೆ ಸುರಕ್ಷಿತ ಪಿಂಚಣಿ ವ್ಯವಸ್ಥೆ ರೂಪಿಸಿಕೊಳ್ಳುವುದು ಸಾಧ್ಯವಾಗಲಿದೆ.
 
`ಸೆಬಿ~ ತೆರೆದಿರುವ ಕಿಟಕಿಯಾದರೂ ಎಷ್ಟು ದೊಡ್ಡದು? ಅಮೆರಿಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ, ಅಲ್ಲಿ ಶೇ 68ರಷ್ಟು ಕುಟುಂಬಗಳು ಪಿಂಚಣಿಗೆ ಹಾದಿ ಮಾಡಿಕೊಡುವ ಮ್ಯೂಚುವಲ್ ಫಂಡ್ ಉತ್ಪನ್ನಗಳನ್ನು ಹೊಂದಿವೆ.

ನಿಧಾನವಾಗಿ ಇಂತಹ ವ್ಯವಸ್ಥೆ ಭಾರತದಲ್ಲಿ ಸಹ ಬರುವುದು ಸಾಧ್ಯವಿದೆ. ನೇರ ತೆರಿಗೆ ನೀತಿ ಸಂಹಿತೆ ಜಾರಿಗೆ ಬಂದ ನಂತರ ಈ ಪಿಂಚಣಿ ವ್ಯವಸ್ಥೆಯು ಷೇರು ಸಂಬಂಧಿತ ಉಳಿತಾಯ ಯೋಜನೆಗಳಿಗೆ ಈಗ ಇರುವ ತೆರಿಗೆ ಮುಕ್ತ ವ್ಯವಸ್ಥೆ ಕೊನೆಗೊಳ್ಳುವಂತೆ ಮಾಡಲಿದೆ.

ಮ್ಯೂಚುವಲ್ ಫಂಡ್‌ನ ಉದ್ಯಮ ಅಂಗವಾದ ಭಾರತೀಯ ಮ್ಯೂಚುವಲ್ ಫಂಡ್ ಸಂಘ (ಎಎಂಎಫ್‌ಐ) ಕೆಲವು ವಾಸ್ತವ ಸಂಗತಿಗಳನ್ನು ಮುಂದಿಟ್ಟಿದೆ. ಹೊಸ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್) ಕಳೆದ ಮೇ ತಿಂಗಳವರೆಗೆ ಕೇವಲ ರೂ. 8,585 ಕೋಟಿ  ಮಾತ್ರ ಮ್ಯಾನೇಜ್‌ಮೆಂಟ್ ಸಂಗ್ರಹ ರೂಪದಲ್ಲಿ ಕ್ರೋಡೀಕರಣಗೊಂಡಿದೆ.

ಇದರಲ್ಲಿ ಸರ್ಕಾರೇತರ ಕ್ಷೇತ್ರದ ಪಾಲು ಕೇವಲ ರೂ. 100 ಕೋಟಿಗಳಷ್ಟಿದೆ. ಕೇವಲ ರೂ. 50 ಸಾವಿರದಷ್ಟು ಚಂದಾದಾರರಿಂದ ಮಾತ್ರ `ಎನ್‌ಪಿಎಸ್~ ಸಂಗ್ರಹಿಸಲಾಗಿದೆ. ಈ ಕ್ಷೇತ್ರಕ್ಕೆ ಇನ್ನಷ್ಟು ಕಂಪೆನಿಗಳು ಪ್ರವೇಶಿಸಿದರೆ ದೀರ್ಘಾವಧಿಯ ಪಿಂಚಣಿ ನಿಧಿಯನ್ನು ನಿಯಂತ್ರಿಸುವವರು ಯಾರು ಎಂಬುದನ್ನು ಈಗಲೇ ನಿರ್ಧರಿಸಬೇಕು ಎಂದು `ಸೆಬಿ~ ಹೇಳಿದೆ.

`ಸೆಬಿ~ಯು ಪಿಂಚಣಿ ನಿಧಿಯಲ್ಲಿ ಸುಧಾರಣೆ ಪ್ರಕಟಿಸಿರುವುದರ ಜತೆಗೆ ಇನ್ನೂ ಕೆಲವು ಸುಧಾರಣೆಗಳನ್ನು ಪ್ರಕಟಿಸಿದೆ. 1996ರ ಸೆಬಿ (ಎಂಎಫ್) ನಿಯಂತ್ರಣ ಕಾಯ್ದೆಗೆ ತಿದ್ದುಪಡಿ, ನಿರ್ವಹಣಾ ವೆಚ್ಚ, ಮಾಹಿತಿ ಪಾರದರ್ಶಕತೆ, ಮ್ಯೂಚುವಲ್ ಫಂಡ್ ವಿತರಕರ ನಿಯಂತ್ರಣಗಳು ಇದರ್ಲ್ಲಲಿ ಸೇರಿವೆ.

ನಿರ್ವಹಣಾ ವೆಚ್ಚ
ಹೂಡಿಕೆದಾರರಿಗೆ ಪ್ರವೇಶ ಶುಲ್ಕ ರದ್ದುಪಡಿಸಿದ್ದರಿಂದ ಆಗುವ ನಷ್ಟವನ್ನು ಏಜೆಂಟ್‌ಗಳಿಗೆ ವಿಶೇಷ ಪ್ರೋತ್ಸಾಹ ಧನ ರೂಪದಲ್ಲಿ ಭರ್ತಿ ಮಾಡಬೇಕು ಎಂಬುದು ಮ್ಯೂಚುವಲ್ ಫಂಡ್ ಉದ್ಯಮದ ಮುಖ್ಯ ಬೇಡಿಕೆಯಾಗಿತ್ತು.

ಸಣ್ಣ ಪಟ್ಟಣಗಳಲ್ಲೂ ಮ್ಯೂಚುವಲ್ ಫಂಡ್ ಸಂಸ್ಥೆಗಳು ಕಾರ್ಯ ನಿರ್ವಹಿಸಬೇಕು ಎಂಬುದು ಸೆಬಿಯ ಚಿಂತನೆಯಾಗಿದೆ. ರೂ.10 ಸಾವಿರಕ್ಕಿಂತ ಅಧಿಕ ಮೊತ್ತದ ಹೂಡಿಕೆಗೆ `ಸೆಬಿ~ಯು ನಿರ್ವಹಣಾ ಶುಲ್ಕದ ರೂಪದಲ್ಲಿ ರೂ.150  ಪಡೆದುಕೊಳ್ಳಲು ಅವಕಾಶ ನೀಡಿದೆ. 10 ಸಾವಿರಕ್ಕಿಂತ ಕಡಿಮೆ ಹೂಡಿಕೆಗೆ ಯಾವ ಶುಲ್ಕವೂ ಇಲ್ಲ.

`ಸಲಹಾ ಶುಲ್ಕದ ಜತೆಗೆ ರೂ.100-150ಗಳಷ್ಟು ನಿರ್ವಹಣಾ ಶುಲ್ಕ ನೀಡುವುದರಿಂದ ವಿತರಕರು ತಮ್ಮ ಜೇಬಿನಿಂದ ಹಣ ನೀಡುವುದು ಈಗ ತಪ್ಪಿದಂತಾಗುತ್ತದೆ. ಇದೊಂದು ಎಲ್ಲರಿಗೂ ಇಷ್ಟವಾಗುವ ಸನ್ನಿವೇಶ~ ಎಂದು ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್‌ಮೆಂಟ್ ಸಿಇಒ ಸಂದೀಪ್ ಸಿಕ್ಕಾ ಹೇಳುತ್ತಾರೆ.

ಆದರೆ `ಪ್ರಜಾವಾಣಿ~ ಮಾತನಾಡಿಸಿದ ಹಲವು ಸ್ವತಂತ್ರ ಹಣಕಾಸು ಸಲಹೆಗಾರರು (ಐಎಫ್‌ಎ) `ಸೆಬಿ~ ಕೈಗೊಂಡ ಕ್ರಮಗಳು ಸಾಲದು ಎಂಬ ಅಭಿಪ್ರಾಯ ವ್ಯಕ್ತಪಡಿಸ್ದ್ದಿದ್ದಾರೆ.

`ನಾನು ಯೂಲಿಪ್ ಸಹಿತ ವಿಮಾ ಉತ್ಪನ್ನಗಳನ್ನು ಮಾರಾಟ ಮಾಡಿದ್ದರಿಂದ ಹೆಚ್ಚಿನ ಕಮಿಷನ್ (ಶೇ 10ರಿಂದ 15ರಷ್ಟು) ಪಡೆಯುತ್ತಿರುವಾಗ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಮಾರಾಟ ಮಾಡಲು ನಾನೇಕೆ ತಲೆಕೆಡಿಸಿಕೊಳ್ಳಬೇಕು? ರೂ.10 ಸಾವಿರಗಳಿಗೆ ನಿರ್ವಹಣಾ ವೆಚ್ಚವಾಗಿ ಕೇವಲ ರೂ.100  ನೀಡುವುದು ಏನೇನೂ ಸಾಲದು.
 
ಇತರ ವಿಮಾ ಉತ್ಪನ್ನಗಳಿಗೆ ಹೋಲಿಸಿ ನೋಡಿದರೆ ಇದೆಷ್ಟು ಕಡಿಮೆ ಎಂಬುದು ಗೊತ್ತಾಗುತ್ತದೆ~ ಎಂದು ಪುಣೆ ಮೂಲದ ರೂಪೇಶ್ ಸಿಂಗ್ ಹೇಳುತ್ತಾರೆ.

ಕೈಗಾರಿಕಾ ಪರಿಣತರು ಸಹ ಐಎಫ್‌ಎ ನಿಲುವನ್ನು ಒಪ್ಪಿಕೊಳ್ಳುತ್ತಾರೆ. ವಿತರಕರು ಹೂಡಿಕೆದಾರರ ಮನೆಗಳಿಗೆ ಹೋಗಿ ಅವರ ಸಹಿ ಹಾಕಿಸಿಕೊಳ್ಳಲು ರೂ.100 ಗಳಿಗೂ ಹೆಚ್ಚು ವ್ಯಯಿಸಬೇಕಾಗುತ್ತದೆ ಎಂದು ಜಿಯೊಜಿತ್ ಬಿಎನ್‌ಪಿ ಪರಿಬಾಸ್ ಫೈನಾನ್ಸಿಯಲ್ ಸರ್ವೀಸಸ್‌ನ ವ್ಯವಸ್ಥಾಪಕ ನಿರ್ದೇಶಕ ಸಿ.ಜೆ.ಜಾರ್ಜ್ ಹೇಳುತ್ತಾರೆ.

ಇದೇ ರೀತಿಯ ಅಭಿಪ್ರಾಯ ಫ್ರಾಂಕ್ಲಿನ್ ಟೆಂಪ್ಲೆಟಾನ್ ಇನ್‌ವೆಸ್ಟ್‌ಮೆಂಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಕುಡ್ವಾ ಅವರದು. `ಇದೊಂದು ಉತ್ತಮ ಆರಂಭ, ಆದರೆ, `ಐಎಫ್‌ಎ~ಗಳು ವ್ಯಯಿಸುವ ಹಣವನ್ನು ಹಿಂದಕ್ಕೆ ನೀಡುವ ವ್ಯವಸ್ಥೆ ಇಲ್ಲಿಲ್ಲ.ಈ ಮೊದಲು ಇವರು ಶೇ 2.25ರಷ್ಟು ಗಳಿಸುತ್ತಿದ್ದರು, ಆದರೆ ಅದಕ್ಕೆ ಪರ್ಯಾಯ ಒದಗಿಸಿಲ್ಲ, ಆದರೂ ಇದೊಂದು ಉತ್ತಮ ಬೆಳವಣಿಗೆ~ ಎಂದು ಕುಡ್ವಾ ಹೇಳುತ್ತಾರೆ.

`ಹೂಡಿಕೆದಾರ ರೂ.10 ಸಾವಿರ  ತೊಡಗಿಸಲಿ ಅಥವಾ ರೂ.1 ಲಕ್ಷ   ತೊಡಗಿಸಲಿ, ಮ್ಯೂಚುವಲ್ ಫಂಡ್ ವಿತರಕನಿಗೆ ಸಿಗುವುದು ಕೇವಲ ರೂ.150 ಮಾತ್ರ. ಇಷ್ಟು ಸಣ್ಣ ಮೊತ್ತದ ಹಣಕ್ಕಾಗಿ ಯೂನಿಟ್‌ಗಳನ್ನು ಮಾರಾಟ ಮಾಡಲು ನನ್ನ ಸಮಯವನ್ನು ಮೀಸಲಿಡುವುದು ಅರ್ಥಹೀನ~ ಎಂದು ಠಾಣೆ ಮೂಲದ ಹಣಕಾಸು ಸಲಹೆಗಾರ ಸಂಜಯ್ ಗುಂಡಾವರ್ ಹೇಳುತ್ತಾರೆ.

ಮಾಹಿತಿ  ಪಾರದರ್ಶಕತೆ

ಮ್ಯೂಚುವಲ್ ಫಂಡ್‌ಗಳು ತಮ್ಮಯೋಜನೆಗಳನ್ನು ಪ್ರಚಾರಗೊಳಿಸುವಾಗ `ಸಿಎಜಿಆರ್~ನಂತಹ (ಕಾಂಪೌಂಡೆಡ್ ಆ್ಯನ್ಯುವಲೈಸ್ಡ್ ಗ್ರೋಥ್ ರೇಟ್ಸ್) ಪದಗಳನ್ನು ಬಳಸಬಾರದು ಎಂದು `ಸೆಬಿ~ ಹೇಳಿದೆ. `ಹೆಚ್ಚಿನ ಹೂಡಿಕೆದಾರರಿಗೆ `ಸಿಎಜಿಆರ್~ ಎಂದರೆ ಏನು ಮತ್ತು ಅದರ ಪ್ರಯೋಜನ ಏನು ಎಂಬುದೇ ಗೊತ್ತಿಲ್ಲ. ಇಂತಹ ವಿಚಾರದಲ್ಲಿ ಸಂವಹನ ಬಹಳ ಸರಳವಾಗಿರಬೇಕು~ ಎಂದು `ಸೆಬಿ~ ಅಧ್ಯಕ್ಷ ಯು.ಕೆ.ಸಿನ್ಹಾ ಹೇಳುತ್ತಾರೆ.

ಆದರೆ, ಹೊಸ ರೀತಿಯಲ್ಲಿ ಹೂಡಿಕೆದಾರರಿಗೆ ಮರಳಿ ನೀಡುವ ವಿಚಾರ  ಬಣ್ಣ ಲೇಪಿಸಿದಂತೆ ಮಾತ್ರ ಕಾಣಿಸುತ್ತದೆ ಎಂದು ಉದ್ಯಮ ವಲಯದ ಹಲವರು ಅಭಿಪ್ರಾಯಪಟ್ಟ್ದ್ದಿದಾರೆ.

`ಸೆಬಿ~ಯು ಕಂಪೆನಿಗಳಿಗೆ ಕೆಲವು ಷರತ್ತುಗಳ ಪಟ್ಟಿಯನ್ನೇ ನೀಡಿದೆ. ಅದರಲ್ಲಿ ಮುಖ್ಯವಾದುದು ಷೇರುದಾರರ ಸಭೆ ಕೊನೆಗೊಂಡ ತಕ್ಷಣ ಹೂಡಿಕೆದಾರರಿಗೆ ಎಂತಹ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂಬುದನ್ನು ಬಹಿರಂಗಪಡಿಸುವುದು.

ಆದರೆ, ಖಾಸಗಿ ಈಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್ ನಿರ್ವಾಹಕರಿಗೆ ಈಗಲೂ ಇಂತಹ ನಿರ್ಧಾರ ಪ್ರಕಟಿಸುವ ಹೊಣೆಗಾರಿಕೆ ಇಲ್ಲ. ಇದನ್ನು ಮ್ಯೂಚುವಲ್ ಫಂಡ್‌ಗಳಿಗೆ ಮಾತ್ರ ಸೀಮಿತಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಕಾನೂನು ತಜ್ಞರ ಪ್ರಶ್ನೆ.

ಎಷ್ಟೇ ಅಪಸ್ವರಗಳಿದ್ದರೂ `ಸೆಬಿ~ಯ ಈ ನಡೆ ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಒಂದು ಮಹತ್ವದ ಉತ್ತೇಜಕ ಕ್ರಮವಂತೂ ನಿಜ. ಇದು ಹಲವಾರು ಸ್ವತಂತ್ರ ಹಣಕಾಸು ಸಲಹೆಗಾರರು ಬೆಳೆಯುವುದಕ್ಕೆ ಅವಕಾಶ ಕಲ್ಪಿಸಲಿದೆ, `ಮ್ಯೂಚುವಲ್ ಫಂಡ್~ಗೆ ಒಳಪಡುವವರ ಸಂಖ್ಯೆಯನ್ನು ವೃದ್ಧಿಸಲಿದೆ~ ಎಂದು ಬಜಾಜ್ ಕ್ಯಾಪಿಟಲ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ದೀಪ್ ಬಜಾಜ್ ಹೇಳುತ್ತಾರೆ.

ಸದ್ಯಕ್ಕೆ ಮ್ಯೂಚುವಲ್ ಫಂಡ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಆರಂಭಿಸಲಾಗಿದ್ದರೂ, ಸ್ವಲ್ಪ ಸಮಯದ ಬಳಿಕ ಉದ್ಯಮ ಹೇಗೆ ಮುನ್ನಡೆಯುತ್ತದೆ ಎಂಬುದನ್ನು `ಎಎಂಸಿ~ಗಳು ನೋಡಬೇಕಾಗುತ್ತದೆ. ಫಂಡ್‌ನಲ್ಲಿ ಹೂಡುವವರ ಸಂಖ್ಯೆ ಇಳಿಮುಖವಾದರೆ ನಿಯಂತ್ರಕರು ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗುತ್ತದೆ.

ವಿತರಕರಿಗೆ ಇನ್ನಷ್ಟು ಆಕರ್ಷಕ ಕಮಿಷನ್ ಕೊಡುಗೆ ನೀಡುವುದು ಇದರಲ್ಲಿ ಮುಖ್ಯವಾಗುತ್ತದೆ. ಶೇ 2.25ರಷ್ಟು ಕಮಿಷನ್ ಜಾಸ್ತಿಯಾಯಿತು ಎಂದಾದರೆ, ಶೇ 0.50 ಅಥವಾ ಶೇ 0.75ರಷ್ಟು ಕಮಿಷನ್ ನೀಡಬಹುದು. ಇದರ ಬಗ್ಗೆ ಶೀಘ್ರ ನಿರ್ಧಾರಕ್ಕೆ ಬರಬೇಕಿದೆ ಎಂದು ವಿವೇಕ್ ಕುಡ್ವಾ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT