ಶಿವಮೊಗ್ಗ: ಯಕ್ಷಗಾನ ಕಲೆಗೆ ಸ್ಥಳಿಯ ಪ್ರತಿಭೆಗಳ ಸಹಕಾರ ಹಾಗೂ ಪ್ರೋತ್ಸಾಹದ ಅಗತ್ಯ ಎಂದು ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ಬಿ.ಎಸ್.ಕಾಮತ್ ಅಭಿಪ್ರಾಯಪಟ್ಟರು.
ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಶ್ರೀಮಾತಾ ಮಹಿಳಾ ಯಕ್ಷಕಲಾ ಟ್ರಸ್ಟ್ ಹಮ್ಮಿಕೊಂಡಿದ್ದ ಯಕ್ಷಕಲಾ ಸಿಂಚನ–3 ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಕ್ಷಗಾನ ಕಲೆಯನ್ನು ಆರಾಧಿಸುವ ಸ್ಥಳಿಯ ಪ್ರತಿಭೆಗಳು ಹೆಚ್ಚು ಬೇಕಾಗಿದ್ದು, ಈ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಶಕ್ತಿ ಅವರಲ್ಲಿರುತ್ತದೆ ಎಂದರು.
ಮಲೆನಾಡಿನಲ್ಲಿರುವ ಯಕ್ಷಗಾನ ಸಂಸ್ಕೃತಿಯನ್ನು ಉಳಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಲೆಯ ಆರಾಧಕರು ಹೆಚ್ಚಾಗುತ್ತಿದ್ದಾರೆ ಎಂದು ತಿಳಿಸಿದರು. ನಂತರ ಸಿದ್ಧಾಪುರದ ವೇಷಭೂಷಣ ನಿರ್ಮಾತೃ ಎಂ.ಆರ್.ನಾಯಕ್ ಅವರನ್ನು ಸನ್ಮಾನಿಸಲಾಯಿತು. ರವೀಂದ್ರನಗರ ಗಣಪತಿ ದೇವಸ್ಥಾನದ ಅರ್ಚಕ ಅ.ಪ.ರಾಮಭಟ್ಟ ಉದ್ಘಾಟಿಸಿದರು.ಶ್ರೀಮಾತಾ ಮಹಿಳಾ ಯಕ್ಷಕಲಾ ಟ್ರಸ್ಟ್ ನ ಅಧ್ಯಕ್ಷೆ ರಮಾಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.