ಉಡುಪಿ: `ಯಕ್ಷಗಾನ ಅಭ್ಯಸಿಸುವುದರಿಂದ ಮೈ-ಮನಸ್ಸು ಆರೋಗ್ಯಪೂರ್ಣವಾಗಿ ವಿಕಸನಗೊಳ್ಳುತ್ತದೆ. ಬದುಕಿನಲ್ಲಿ ಜಟಿಲ ಸಮಸ್ಯೆಗಳು ಎದುರಾದಾಗ ನಾವು ಕಲಿತ ಕಲೆಯ ಮೂಲಕ ಅದರ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ' ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯಬಲ್ಲಾಳ ಅಭಿಪ್ರಾಯಪಟ್ಟರು.
ಅಂಬಲಪಾಡಿ ಯಕ್ಷಗಾನ ಮಂಡಳಿ ಮಕ್ಕಳಿಗಾಗಿ ಅಂಬಲಪಾಡಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಹತ್ತು ದಿನಗಳ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಹವ್ಯಾಸಿ ತಂಡಗಳಿಗೆ ಮಾದರಿ ಎಂಬಂತೆ ಕಾರ್ಯ ನಿರ್ವಹಿಸುತ್ತಿರುವ ಅಂಬಲಪಾಡಿ ಯಕ್ಷಗಾನ ಮಂಡಳಿ ಹಮ್ಮಿಕೊಂಡ ಹತ್ತು ದಿನದ ಯಕ್ಷಗಾನ ಶಿಬಿರ ಔಚಿತ್ಯಪೂರ್ಣವಾದ ಕಾರ್ಯಕ್ರಮ ಎಂದರು.
ಏಪ್ರಿಲ್11 ರಿಂದ 20ರ ವರೆಗೆ ಹತ್ತು ದಿನಗಳ ಕಾಲ ಅಂಬಲಪಾಡಿ ಶಾಲೆಯಲ್ಲಿ ಪ್ರತಿದಿನ ಪೂರ್ವಾಹ್ನ ಯಕ್ಷಗಾನ ಶಿಬಿರ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಲಪಾಡಿ ಶಾಲಾ ಸಂಚಾಲಕರಾದ ಪ್ರೊ. ರಾಧಾಕೃಷ್ಣ ಆಚಾರ್ ವಹಿಸಿದ್ದರು. ಅತಿಥಿಗಳಾಗಿ ಅಂಗವಿಕಲ ಕಲ್ಯಾಣಾಧಿಕಾರಿ ನಿರಂಜನ್ ರಾವ್, ಶಾಲಾ ಮುಖ್ಯೋಪಾಧ್ಯಾಯ ರಮೇಶ್ ಪುತ್ತೂರು ಭಾಗವಹಿಸಿದ್ದರು.
ಆರಂಭದಲ್ಲಿ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿದರು. ಡಾ. ಪಿ. ಗಣಪತಿ ಭಟ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಜಯ ಕೆ.ವಂದಿಸಿದರು. ಶಿಬಿರದ ನಿರ್ದೇಶಕ ಕೆ.ಜೆ.ಕೃಷ್ಣ ಹಾಗೂ ಭಾಗವತ ಕೆ.ಜೆ.ಗಣೇಶ ಉಪಸ್ಥಿತರಿದ್ದರು.