ಬೆಂಗಳೂರು (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಣವು ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಜುಲೈ 5 ರ ಗಡುವು ನೀಡಿದೆ.
ಭಾನುವಾರ ಬೆಳಿಗ್ಗೆ ಶೆಟ್ಟರ್ ಅವರ ನಿವಾಸದಲ್ಲಿ ಸಭೆ ಸೇರಿದ ಯಡಿಯೂರಪ್ಪ ಬಣದ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸರ್ವಾನುಮತದಿಂದ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಲು ಜುಲೈ 5 ರ ಗಡುವನ್ನು ವಿಧಿಸಿದರು.
ಈ ವಿಷಯನ್ನು ಖಚಿತಪಡಿಸಿದ ರಾಜೂಗೌಡ ಅವರು ತಾವೆಲ್ಲರೂ ಒಕ್ಕೊರಲಿನಿಂದ ಜುಲೈ 5 ರ ಒಳಗಾಗಿ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕೆಂದು ಮನವಿ ಮಾಡಿದ್ದಾಗಿ ತಿಳಿಸಿದರು.
ಒಂದು ವೇಳೆ ತಮ್ಮ ಬೇಡಿಕೆ ಈಡೇರದೆ ಹೋದರೆ ಜುಲೈ 5 ರಂದು ತಾವು ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ 55 ಶಾಸಕರು, 15 ವಿಧಾನಪರಿಷತ್ ಸದಸ್ಯರು ಹಾಗೂ 8 ಮಂದಿ ಸಂಸದರೂ ಭಾಗವಹಿಸಿದ್ದರು ಎಂದು ಅವರು ಹೇಳಿದರು.