ಬೆಂಗಳೂರು: ಚಲನಚಿತ್ರ ನಟಿ ರಮ್ಯಾ ಅವರು ಯುವ ಕಾಂಗ್ರೆಸ್ನ ಬೂತ್ ಮಟ್ಟದ ಪದಾಧಿಕಾರಿಯಾಗಲು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಬಹುತೇಕ ಖಚಿತವಾದಂತಾಗಿದೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 3ರಲ್ಲಿ ರಮ್ಯಾ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸಭೆ, ಲೋಕಸಭೆ ಅಥವಾ ರಾಜ್ಯ ಮಟ್ಟದ ಯುವ ಕಾಂಗ್ರೆಸ್ ಸಮಿತಿಗಳಿಗೆ ಪದಾಧಿಕಾರಿಯಾಗಬೇಕಾದರೆ ಕಡ್ಡಾಯವಾಗಿ ಬೂತ್ ಮಟ್ಟದ ಚುನಾವಣೆಯಲ್ಲಿ ಗೆದ್ದಿರಬೇಕು.
ಈ ಹಿನ್ನೆಲೆಯಲ್ಲೇ ರಮ್ಯಾ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅವರು ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಲೆಕ್ಕಾಚಾರದಿಂದಲೇ ಬೂತ್ ಮಟ್ಟದ ಸಮಿತಿಯ ಚುನಾವಣೆಗೆ ಸ್ಪರ್ಧಿಸಿದ್ದಾರೆ ಎಂದು ಗೊತ್ತಾಗಿದೆ. ರಾಜ್ಯದ ಎಲ್ಲ ಕಡೆಯೂ ಬೂತ್ ಮಟ್ಟದ ಸಮಿತಿಗಳಿಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆ ದಿನವಾಗಿದ್ದು, ಮಂಗಳವಾರ ಅವುಗಳ ಪರಿಶೀಲನೆ ನಡೆಯಲಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಪ್ರಿಯಾಂಕ ಖರ್ಗೆ ಅವರು ಚಿತ್ತಾಪುರ ಹಾಗೂ ಎ.ಪಿ.ಬಸವರಾಜ ಅವರು ಅರಸೀಕೆರೆ ವಿಧಾನಸಭಾ ಕ್ಷೇತ್ರದ 169ನೇ ಬೂತ್ನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ರಿಜ್ವಾನ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ.