ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ನೀಡುವ `ರಮಣಶ್ರೀ ಶರಣ ಪ್ರಶಸ್ತಿ~ಗೆ ಡಾ.ಎಸ್.ಆರ್. ಗುಂಜಾಳ್ (ಸಂಶೋಧನೆ), ಅಥಣಿ ಪ್ರಭುಬಸವ ಸ್ವಾಮೀಜಿ (ವಚನ ರಚನೆ), ದೀನಬಂಧು ಟ್ರಸ್ಟ್ (ಶರಣ ಸಂಸ್ಕೃತಿ ಪ್ರಸಾರ/ಜಿ.ಎಸ್. ಜಯದೇವ್) ಹಾಗೂ ಕುಮಾರದಾಸ್ (ವಚನ ಸಂಗೀತ) ಆಯ್ಕೆಯಾಗಿದ್ದಾರೆ.
ಶರಣ ಸಾಹಿತ್ಯ, ವಚನ, ಸಂಸ್ಕೃತಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಅದರಂತೆ 2011ನೇ ಸಾಲಿನ ಪ್ರಶಸ್ತಿಗೆ ಈ ನಾಲ್ಕು ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರಸ್ಕೃತರಿಗೆ ತಲಾ 25 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 17ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.