ರಾಯಚೂರು: ರಸಪ್ರಶ್ನೆ ಎಂಬುದು ಕೇವಲ ತರಗತಿಗೆ ಮಾತ್ರ ಸೀಮಿತವಲ್ಲ. ಪಠ್ಯೇತರ ಚಟುವಟಿಕೆಯಾಗಿಯೂ ಉಪಯುಕ್ತವಾಗಿದೆ. ರಸಪ್ರಶ್ನೆಯ ಬಗ್ಗೆ ಆಸಕ್ತಿ ಹೊಂದಿರುವ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿ ಕಾರ್ಜುನ ಹೇಳಿದರು. ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಶಿಕ್ಷಣ ಟ್ರಸ್ಟ್ ರಾಯಚೂರು ಜಿಲ್ಲೆ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಹೆಚ್ಚಿಸುವ ದಿಶೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಮುಖ್ಯ ಅತಿಥಿಯಾಗಿದ್ದ ವಿಜ್ಞಾನ ವಿಷಯ ಪರಿವೀಕ್ಷಕ ಎಸ್.ಕೆ.ಎಂ. ಪೀರಜಾದೆ ಹೇಳಿದರು. ರಸಪ್ರಶ್ನೆ ಎಂಬುದು ಮಕ್ಕಳು ಸ್ವಯಂ ಪ್ರೇರಿತ ಕಲಿಕೆಗೆ ಪ್ರೋತ್ಸಾಹ ನೀಡುತ್ತದೆ. ತಾವೇ ಹೊಸ ವಿಚಾರಗಳ ಬಗ್ಗೆ ಅರಿಯುವ ಪ್ರಯತ್ನ ಮಾಡುತ್ತಾರೆ. ಇದರಿಂದ ಕಲಿಕೆಯೂ ಅರ್ಥಪೂರ್ಣವಾಗಿರುತ್ತದೆ ಎಂದು ಮತ್ತೊಬ್ಬ ಅತಿಥಿ, ಗಣಿತ ವಿಷಯ ಪರಿವೀಕ್ಷಕ ಮಲ್ಲಯ್ಯ ನಾಗೋಲಿ ತಿಳಿಸಿದರು.