ನವದೆಹಲಿ (ಐಎಎನ್ಎಸ್): ರಸ್ತೆ ಅಪಘಾತಗಳಿಂದಾಗಿ ಪ್ರತಿ ವರ್ಷ ಭಾರತಕ್ಕೆ ಒಂದು ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಅಂತರರಾಷ್ಟ್ರೀಯ ರಸ್ತೆ ಒಕ್ಕೂಟ (ಐಆರ್ಎಫ್) ಹೇಳಿದೆ.
ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳನ್ನು ತಡೆಯಲು ಭಾರತದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ ಎಂದೂ ಅದು ಹೇಳಿದೆ.
`ರಸ್ತೆಗಳ ಅಪಘಾತದಿಂದಾಗಿ ಆಗುತ್ತಿರುವ ಆರ್ಥಿಕ ನರ್ಷ ಒಂದು ಲಕ್ಷ ಕೋಟಿ ದಾಟಿದೆ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಇದೆ. ಅದಕ್ಕೆ ಸಂಬಂಧಿಸಿದ ಅಂಕಿ ಅಂಶಗಳ ದಾಖಲೆಗಳೂ ಇವೆ. ಆದರೆ ಈ ಸಮಸ್ಯೆಯನ್ನು ತಡೆಯಲು ಬೇಕಾದ ರಾಜಕೀಯ ಇಚ್ಛಾಶಕ್ತಿ ಇಲ್ಲ~ ಎಂದು ಐಆರ್ಎಫ್ ಅಧ್ಯಕ್ಷ ಕೆ.ಕೆ. ಕಪಿಲಾ ಹೇಳಿದ್ದಾರೆ.
ಐಆರ್ಎಫ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಉತ್ತಮ ಮತ್ತು ಸುಸ್ಥಿರ ರಸ್ತೆ ಹಾಗೂ ರಸ್ತೆ ಜಾಲಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿದೆ.
ದಶಕದ ಹಿಂದೆ ಅಂದರೆ 2001-2003ರಲ್ಲಿ ಯೋಜನಾ ಆಯೋಗವು ನಡೆಸಿರುವ ಅಧ್ಯಯನದ ಪ್ರಕಾರ 1990-2000ದ ಅವಧಿಯಲ್ಲಿ ರಸ್ತೆ ಅಪಘಾತಗಳಿಂದಾಗಿ ದೇಶದ ಬೊಕ್ಕಸಕ್ಕೆ ವಾರ್ಷಿಕವಾಗಿ 55,000 ಕೋಟಿ ರೂಪಾಯಿ ಅಂದರೆ ದೇಶದ ಜಿಡಿಪಿಯ ಶೇ 3ರಷ್ಟು ನಷ್ಟವಾಗುತ್ತಿತ್ತು.
ಈಗ ಐಆರ್ಎಫ್ ನೀಡಿರುವ ಅಂಕಿ ಅಂಶಗಳು ರಸ್ತೆ ಅಪಘಾತಗಳಿಂದಾಗಿ ದುಪ್ಪಟ್ಟು ಆರ್ಥಿಕ ನಷ್ಟ ಆಗುತ್ತಿರುವುದನ್ನು ತೋರಿಸುತ್ತವೆ.
ಈ ಆರ್ಥಿಕ ನಷ್ಟದಲ್ಲಿ ಸಂತ್ರಸ್ತ ಸಂಬಂಧಿ ವೆಚ್ಚಗಳು, ಆಸ್ತಿಪಾಸ್ತಿ ಹಾನಿ ಮತ್ತು ಆಡಳಿತಾತ್ಮಕ ವೆಚ್ಚಗಳು ಸೇರಿವೆ.