ಹೊಸದುರ್ಗ: ಪಟ್ಟಣದ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಜಾಗೃತ ನಾಗರಿಕ ಸಂಘಟನೆ ಹಾಗೂ ಎಐಡಿವೈಒ ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ.
ಹುಳಿಯಾರು ರಸ್ತೆಯಲ್ಲಿರುವ ವೀರಭದ್ರಸ್ವಾಮಿ ದೇವಾಲಯದಿಂದ ಮದಕರಿ ವೃತ್ತದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿರುವುದರಿಂದ ವಾಹನಗಳ ಸಂಚಾರ ಹಾಗೂ ಜನಸಾಮಾನ್ಯರು ಓಡಾಡಲು ತೊಂದರೆಯಾಗಿದೆ ಎಂದು ಸದಸ್ಯರು ಪ್ರಕಟಣೆಯಲ್ಲಿ ದೂರಿದ್ದಾರೆ.
ರಸ್ತೆ ಬದಿಯಲ್ಲಿರುವ ವಾಣಿಜ್ಯ ಮಳಿಗೆಗಳು ಹಾಗೂ ವಾಸದ ಮನೆಗಳಲ್ಲಿ ದಿನನಿತ್ಯ ದೂಳು ತುಂಬಿಕೊಳ್ಳುತ್ತಿದ್ದು ಬದುಕುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ಉಂಟಾಗಿದೆ. ರಸ್ತೆಬದಿಯ ಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ಸಂಘಟನೆ ಸದಸ್ಯರು ಆಗ್ರಹಿಸಿದ್ದಾರೆ.
ರಸ್ತೆ ಅಭಿವೃದ್ಧಿ ಕಾಮಗಾರಿ ನಿಂತಿರುವುದರಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸದೇ ಹೋದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಐಡಿವೈಒ ಸಂಘಟನೆಯ ರವಿಕುಮಾರ್, ನಾಗರಿಕರಾದ ದೇವರಾಜ್, ಕೃಷ್ಣಮೂರ್ತಿ, ಜಯದೇವಮೂರ್ತಿ ಮತ್ತಿತರರು ಎಚ್ಚರಿಸಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ಮನವಿ ಸಲ್ಲಿಸಿದ್ದಾರೆ.