ಕೆಜಿಎಫ್: ಸಮೀಪದ ಬೇತಮಂಗಲ ಬಸ್ ನಿಲ್ದಾಣ ಸಮೀಪದ ಒತ್ತುವರಿ ತೆರವುಗೊಳಿಸಿ ರಸ್ತೆ ವಿಸ್ತರಣೆ ಕಾರ್ಯಾಚರಣೆ ಭಾನುವಾರ ಭರದಿಂದ ನಡೆಯಿತು. ಹೋಬಳಿ ಕೇಂದ್ರವಾದ ಬೇತಮಂಗಲದ ಪೊಲೀಸ್ ಠಾಣೆ ಎದುರು ಗ್ರಾಮ ಪಂಚಾಯಿತಿವರೆಗೂ ರಸ್ತೆ ಬದಿ ಇದ್ದ ಒತ್ತುವರಿ ತೆರವು ಕಾರ್ಯ ನಡೆದವು.
ಕಟ್ಟಡದ ಮಾಲೀಕರು ಸ್ವತಃ ಒತ್ತುವರಿ ಕಾರ್ಯಾಚರಣೆಗೆ ಸಹಕರಿಸಿದರು.
ಸದರಿ ರಸ್ತೆಯ ಎರಡು ಬದಿ ಬೃಹತ್ ಚರಂಡಿ ಹಾಗೂ ದ್ವಿಪಥ ರಸ್ತೆ ನಿರ್ಮಿಸಲಾಗುವುದು. ಕೆಎಸ್ಆರ್ಟಿಸಿ ಬಸ್ ನಿಲ್ದಾಣವರೆಗೂ ತಾತ್ಕಾಲಿಕ ಬಸ್ ನಿಲ್ದಾಣ ಇರುತ್ತದೆ ಎಂದು ಬೇತಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ದುರ್ಗಾಪ್ರಸಾದ್ ತಿಳಿಸಿದ್ದಾರೆ. ಪ್ರಸ್ತುತ ರೂ.10 ಕೋಟಿ ಕಾಮಗಾರಿ ನಡೆಯುತ್ತಿದೆ.
ಕೋಲಾರ ರಸ್ತೆ ವಿಸ್ತರಣೆ, ಕೆಜಿಎಫ್ ರಸ್ತೆಯ ಜೋಡಿ ರಸ್ತೆ ನಿರ್ಮಾಣ ಕೂಡ ಪ್ರಗತಿಯಲ್ಲಿದೆ. ಈಗ ತೆರವುಗೊಳಿಸುವ ಸ್ಥಳದಲ್ಲಿನ ಪೊಲೀಸ್ ಠಾಣೆಯನ್ನು ಸಹ ಜಲಮಂಡಳಿ ಕಚೇರಿ ಸಮೀಪದ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಪೊಲೀಸ್ ಠಾಣೆ ನಿರ್ಮಾಣಕ್ಕೆ ಮುಕ್ಕಾಲು ಎಕರೆ ಜಮೀನನ್ನು ಮಂಜೂರಾಗಿದೆ.
ಸ್ಥಳವನ್ನು ಪೊಲೀಸ್ ಗೃಹ ಮಂಡಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧ್ಯಕ್ಷರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಶಾಸಕ ವೈ.ಸಂಪಂಗಿ ಈ ಸಂದರ್ಭದಲ್ಲಿ ಹಾಜರಿದ್ದು ಪರಿಶೀಲಿಸಿದರು.