ಮುಂಬೈ, (ಪಿಟಿಐ): ಕೃತಿಸ್ವಾಮ್ಯ ಕಾನೂನು ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರನಟ ಶಾರುಖ್ ಖಾನ್, ತಮ್ಮ `ರಾ. ಒನ್~ ಚಿತ್ರ ಬಿಡುಗಡೆಗೆ ಮುನ್ನ ಕೋರ್ಟ್ನಲ್ಲಿ ಒಂದು ಕೋಟಿ ರೂಪಾಯಿ ಠೇವಣಿ ಇಡುವಂತೆ ಮುಂಬೈ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
ಕೋರ್ಟ್ನಲ್ಲಿ ಒಂದು ಕೋಟಿ ರೂಪಾಯಿ ಠೇವಣಿ ಇರಿಸಿದ ಬಳಿಕ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯನ್ಯಾಯಮೂರ್ತಿ ಮೊಹಿತ್ ಶಾ ಮತ್ತು ರೋಶನ್ ದಲ್ವಿ ನೇತೃತ್ವದ ದ್ವಿಸದಸ್ಯ ಪೀಠ ಪ್ರತಿವಾದಿ (ಶಾರುಖ್ , ಅವರ ರೆಡ್ ಚಿಲ್ಲಿಸ್ ಎಂಟರ್ಟೆನಮೆಂಟ್ ಮತ್ತು ಎರೊಸ್ ಎಂಟರ್ಟೆನಮೆಂಟ್)ಗೆ ನಿರ್ದೇಶನ ನೀಡಿದೆ.
ಶಾರುಖ್ ಅವರ ಬಹುನಿರೀಕ್ಷಿತ `ರಾ. ಒನ್~ ಚಿತ್ರದ ಮೂಲ ಕೃತಿಸ್ವಾಮ್ಯ ತಮ್ಮದು ಎಂದು ವಾದಿಸಿರುವ ದೂರದರ್ಶನ ನಿರ್ದೇಶಕ ಮತ್ತು ಲೇಖಕ ಯಶ್ ಪಟ್ನಾಯಕ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಒಂದು ವೇಳೆ ಪ್ರತಿವಾದಿಗಳು ಶನಿವಾರದಂದು ಈ ಹಣ ಠೇವಣಿ ಇಡುವಲ್ಲಿ ವಿಫಲವಾದರೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡುವುದಾಗಿಯೂ ಕೋರ್ಟ್ ಎಚ್ಚರಿಕೆ ನೀಡಿದೆ.
ಚಲನಚಿತ್ರದ ಉದ್ಯಮಿಗಳು ಬೇರೆಯವರ ಕೃತಿಯನ್ನು ಬಳಸಿಕೊಂಡರೂ ಕೃತಿಕಾರರಿಗೆ ಹಣ ಅಥವಾ ನ್ಯಾಯ ಒದಗಿಸದಿರುವುದು ವಿಷಾದಕರ ಎಂದು ಪೀಠ ಹೇಳಿದೆ.
ರಾ.ಒನ್ ಚಿತ್ರದಲ್ಲಿ ಶಾರುಖ್ ಖಾನ್, ಕರೀನಾ ಕಪೂರ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದು ಅಕ್ಟೋಬರ್ 26ರಂದು ಬಿಡುಗಡೆಗೆ ನಿಗದಿಯಾಗಿದೆ.