ರಾಂಚಿ (ಜಾರ್ಖಂಡ್) (ಪಿಟಿಐ): ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕಾರ್ಯ ನಿರತವಾಗಿದ್ದ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹೆಲಿಕಾಪ್ಟರ್ ಒಂದು ರಾಂಚಿಯ ಹೊರ ಹೊರವಲಯದಲ್ಲಿ ನೆಲಕ್ಕಪ್ಪಳಿಸಿದ ಪರಿಣಾಮವಾಗಿ ಅದರಲ್ಲಿ ಇದ್ದ ಇಬ್ಬರು ಪೈಲಟ್ ಗಳು ಮತ್ತು ಒಬ್ಬ ತಂತ್ರಜ್ಞ ಮೃತರಾಗಿದ್ದಾರೆ.
ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (ಎಎಲ್ ಎಚ್) ಧ್ರುವ ರಾಂಚಿಯಿಂದ ಚೈಬಾಸಾ ಕಡೆಗೆ ಹೊರಟಿದ್ದಾಗ ಅದರ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಅದು ಖುಂಟಿ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿ ತಿಳಿಸಿದರು.
ಪವನ ಹಂಸ್ ಹೆಲಿಕಾಪ್ಟರ್ ನಲ್ಲಿದ್ದ ಕ್ಯಾಪ್ಟನ್ ಥಾಮಸ್, ಕ್ಯಾಪ್ಟನ್ ಎಸ್.ಪಿ. ಸಿಂಗ್ ಮತ್ತು ತಂತ್ರಜ್ಞ ಮನೋಜ್ ಕುಮಾರ್ ಸ್ವೈನ್ ದುರಂತದಲ್ಲಿ ಮೃತರಾದರು ಎಂದು ಅವರು ಹೇಳಿದರು.
ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ನೆಲೆಗೊಳಿಸಲಾಗಿದ್ದ ಸಿಆರ್ ಪಿ ಎಸ್ ಸಿಬ್ಬಂದಿಯ ತಂಡ ಕೂಡಾ ಸ್ಥಳಕ್ಕೆ ಧಾವಿಸಿದೆ. ಕಲೈಕುಂಡ ವೈಮಾನಿಕ ನೆಲೆಯಿಂದ ವಾಯುಪಡೆ ಕೂಡಾ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.