ಬಂಗಾರಪೇಟೆ:‘ಮುಖ್ಯಮಂತ್ರಿ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಲಿ? ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಉಪಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣಕ್ಕೆ ಆಗಮಿಸಿ ರೋಡ್ ಷೋ ಮೂಲಕ ಮತಯಾಚನೆ ಮಾಡುವ ಮುನ್ನ ಅವರು ಸುದ್ದಿಗಾರರೊಡನೆ ಮಾತನಾಡಿದರು.
’ರಾಜೀನಾಮೆ ನೀಡುವಂಥ ಯಾವ ತಪ್ಪನ್ನೂ ನಾನು ಮಾಡಿಲ್ಲ. ನಾನು ತಪ್ಪಿತಸ್ಥನೋ ಅಲ್ಲವೋ ಎಂದು ತೀರ್ಮಾನಿಸಲು ನ್ಯಾಯಾಲಯಗಳಿವೆ. ಅದನ್ನು ಬಿಟ್ಟು ಎಚ್.ಡಿ.ದೇವೇಗೌಡರು ಮತ್ತು ಅವರ ಮಕ್ಕಳು ಹೇಳಿದರೆಂದು ನಾನೇನು ರಾಜೀನಾಮೆ ನೀಡಬೇಕಾಗಿಲ್ಲ’ ಎಂದು ಪ್ರತಿಪಾದಿಸಿದರು.
’ರಾಜ್ಯ ಸಂಪನ್ಮೂಲವನ್ನು ಕೊಳ್ಳೆ ಹೊಡೆದಿರುವುದು ದೇವೇಗೌಡ ಮತ್ತು ಅವರ ಮಕ್ಕಳು. ಅದು ಇಡೀ ರಾಷ್ಟ್ರಕ್ಕೇ ಗೊತ್ತಿದೆ. ಅವರು ಕೊಳ್ಳೇ ಹೊಡೆದು ನಮ್ಮ ಹೆಸರು ಹೇಳುತ್ತಿದ್ದಾರೆ. ಅದಕ್ಕೆ ರಾಜ್ಯ ಜನತೆಯೇ ಉತ್ತರಿಸುತ್ತಾರೆ. ರಾಜ್ಯದ ಮೂರು ಕಡೆ ನಡೆಯುತ್ತಿರುವ ಉಪ ಚುನಾವಣೆಗಳಲ್ಲಿ ದೇವೆಗೌಡ ಮತ್ತು ಅವರ ಮಕ್ಕಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು.
’ಬಿಜೆಪಿ ಉತ್ತಮ ಆಡಳಿತ ನೀಡುತ್ತಿರುವುದನ್ನು ಕಂಡು ಜನತೆ, ನಾಯಕರು ಸ್ವಂಥ ಇಚ್ಛೆಯಿಂದ ಮುಂದೆ ಬಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇಲ್ಲಿ ಯಾರನ್ನೂ ಕಟ್ಟಿಹಾಕಿ ಎಳೆದುಕೊಂಡು ಬಂದು ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಇಲ್ಲಿನ ಶಾಸಕರೂ ತಾವಾಗಿಯೇ ಇಷ್ಟಪಟ್ಟು ಪಕ್ಷ ಸೇರಿದ್ದಾರೆ’ ಎಂದು ನುಡಿದರು.
’ಪಕ್ಷದಲ್ಲಿ ಪ್ರತಿಯೊಬ್ಬರ ಸಾಮರ್ಥ್ಯಕ್ಕನುಗುಣವಾಗಿ ಪದವಿಗಳನ್ನು ನೀಡುತ್ತೇವೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಂ.ನಾರಾಯಣಸ್ವಾಮಿಯವರಿಗೆ ಟಿಕೆಟ್ ನೀಡಿದ್ದೇವೆ. ಅವರು ಬಿಜೆಪಿಯನ್ನು ಏಕೆ ಸೇರಿದರು ಎಂಬುದು ಮುಖ್ಯವಲ್ಲ. ಅವರು ಆ ಪಕ್ಷವನ್ನು ಏಕೆ ಬಿಟ್ಟರು ಎಂಬುದೇ ಮುಖ್ಯ ಪ್ರಶ್ನೆ ಎಂದು ಹೇಳಿದರು.