ಕಂಪ್ಲಿ: ಸಮೀಪದ ಮೆಟ್ರಿ ಗ್ರಾಮದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ-29ರ ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಕೆಂಪು ಮಣ್ಣು ಹಾಕಿದ್ದು, ಗುತ್ತಿಗೆದಾರರು ಶಾಶ್ವತ ಕಾಮಗಾರಿ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಹೊಸಪೇಟೆ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಜಡೆಪ್ಪ ನಿಡುಗೋಳು ಆರೋಪಿಸಿದ್ದಾರೆ.
ಗ್ರಾಮದ ಮಧ್ಯೆ ಹಾದು ಹೋಗಿರುವ ರಾಜ್ಯ ಹೆದ್ದಾರಿ ದುರಸ್ತಿ ಕಾಮಗಾರಿ ವಿಳಂಬದಿಂದ ರಸ್ತೆ ಅಕ್ಕಪಕ್ಕದಲ್ಲಿ ವಾಸಿಸುವ ನೂರಾರು ಕುಟುಂಬಗಳು ಕೆಂದೂಳಿನ ಅಭಿಷೇಕಕ್ಕೆ ತತ್ತರಿಸಿವೆ. ಇನ್ನು ಕೆಲವರು ದಮ್ಮು, ಕೆಮ್ಮು, ಅಸ್ತಮಾ ಇತ್ಯಾದಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ರಸ್ತೆ ಪಕ್ಕದ ಮನೆಗಳು ಸದ್ಯ ಕೆಂಧೂಳಿನಿಂದ ಆವೃತ್ತವಾಗಿದ್ದರೆ, ಗಾಳಿ ಬೆಳಕಿಗಾಗಿ ಮೀಸಲಿರುವ ಕಿಟಕಿಗಳನ್ನು ತೆಗೆಯದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ರಸ್ತೆ ಪಕ್ಕದಲ್ಲಿ ಬಸ್ಗಾಗಿ ಕಾಯುವ ಪ್ರಯಾಣಿಕರು ಕೆಂಪು ದೂಳಿನಿಂದ ಬೇಸತ್ತಿದ್ದಾರೆ. ಕೆಂಪು ಮಣ್ಣು ಹಾಕಿರುವ ರಸ್ತೆ ಸಂಪೂರ್ಣ ತಗ್ಗು ಮಿಟ್ಟಿಯಿಂದ ಕೂಡಿರುವುದರಿಂದ ವಾಹನಗಳು ಸರ್ಕಸ್ ಮಾಡುತ್ತಾ ಚಲಿಸುವಾಗ ತುಂಬಾ ಶಬ್ದವಾಗುತ್ತಿದೆ. ಇದರಿಂದಲೂ ಜನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.