ಚಾಮರಾಜನಗರ: ರಾಜ್ಯದಲ್ಲಿ ಡಿ. 16ರಿಂದ 23ರವರೆಗೆ ನಡೆಯಲಿರುವ ಹುಲಿ ಗಣತಿಗೆ ಮೊದಲ ಬಾರಿಗೆ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟ್ಂ) ತಂತ್ರಾಂಶ ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.
ಬಂಡೀಪುರ, ನಾಗರಹೊಳೆ, ಅಣಶಿ– ದಾಂಡೇಲಿ, ಭದ್ರಾ, ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ (ಬಿಆರ್ಟಿ) ಸೇರಿದಂತೆ ರಾಷ್ಟ್ರೀಯ ಉದ್ಯಾನಗಳು, ಎಲ್ಲ ವನ್ಯಜೀವಿಧಾಮಗಳು ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಪ್ರಾದೇಶಿಕ ಅರಣ್ಯ ಪ್ರದೇಶದಲ್ಲಿ ಗಣತಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಹುಲಿ ಗಣತಿಯಲ್ಲಿ ಪಾಲ್ಗೊಳ್ಳಲು ಸ್ವಯಂ ಸೇವಕರಿಗೂ ಅವಕಾಶ ಕಲ್ಪಿಸಲಾಗಿದೆ. ಒಟ್ಟು 800 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಲಾಖೆಯು ಸೂಚಿಸಿರುವ ಅರಣ್ಯ ವಿಭಾಗಕ್ಕೆ ನಿರ್ದಿಷ್ಟ ದಿನ ಹಾಜರಾಗಿ ತರಬೇತಿ ಪಡೆಯುವ ಸ್ವಯಂ ಸೇವಕರಿಗೆ ಮಾತ್ರ ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ.
ರಾಜ್ಯದಲ್ಲಿ ಎನ್ಟಿಸಿಎ ಮಾರ್ಗಸೂಚಿ ಅನ್ವಯ ಹುಲಿ ಗಣತಿ ನಡೆಸಲು ಇಲಾಖೆ ಸಜ್ಜಾಗಿದೆ. ಈಗಾಗಲೇ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಡಿ. 16 ಮತ್ತು 17ರಂದು ಆಯಾ ಅರಣ್ಯ ವಿಭಾಗಗಳಲ್ಲಿ ಸ್ವಯಂ ಸೇವಕರು ಮತ್ತು ಸಿಬ್ಬಂದಿಗೆ ಸೀಳುದಾರಿಯಲ್ಲಿ ಸಂಚರಿಸಿ ಗಣತಿ ನಡೆಸುವುದು ಹಾಗೂ ಅರ್ಜಿಯಲ್ಲಿ ಮಾಹಿತಿ ದಾಖಲಿಸುವ ಕುರಿತು ತರಬೇತಿ ನೀಡಲಾಗುತ್ತದೆ. ತದನಂತರ 18ರಿಂದ 23ರವರೆಗೆ ಗಣತಿ ನಡೆಯಲಿದೆ’ ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿನಯ್ ಲೂತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.
ಗಣತಿಗಾಗಿ ಸುಮಾರು 800 ಸೀಳುದಾರಿಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಸೀಳುದಾರಿಗೂ ಇಲಾಖೆಯ ಸಿಬ್ಬಂದಿಯೊಂದಿಗೆ ಒಬ್ಬ ಸ್ವಯಂ ಸೇವಕನನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಪಿಎಸ್ ಬಳಕೆ
ಜಿಪಿಎಸ್ ತಂತ್ರಾಂಶ ಬಳಸುತ್ತಿರುವುದು ಈ ಗಣತಿಯ ವಿಶೇಷ. ಈ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿಯೇ ಸೀಳುದಾರಿ ಗುರುತಿಸುತ್ತಿದ್ದರು. ಆಗ ನಿಖರತೆ ಇರುತ್ತಿರಲಿಲ್ಲ. 5 ಕಿ.ಮೀ ಉದ್ದದ ಈ ಸೀಳುದಾರಿಯಲ್ಲಿ ಕ್ರಮಿಸಿ ತಮಗೆ ಕಾಣಸಿಗುವ ಹುಲಿ, ಇತರ ಪ್ರಾಣಿಗಳನ್ನು ಗಣತಿದಾರರು ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ ದಾಖಲಿಸಬೇಕಿತ್ತು.
ಈಗ ಜಿಪಿಎಸ್ ತಂತ್ರಾಂಶದ ಮೂಲಕ ಸೀಳುದಾರಿಗಳನ್ನು ನಿಖರವಾಗಿ ಗುರುತಿಸಲಾಗುತ್ತದೆ. ಈ ಸೀಳುದಾರಿಗಳಲ್ಲಿ ಸಂಚರಿಸುವ ಗಣತಿದಾರರು ಹುಲಿಯ ಹೆಜ್ಜೆಗುರುತು, ಆವಾಸ ಗುರುತಿಸುತ್ತಾರೆ. ಜತೆಗೆ, ಇತರೇ ಪ್ರಾಣಿಗಳನ್ನು ತಮಗೆ ನೀಡಿರುವ ಅರ್ಜಿ ನಮೂನೆಯಲ್ಲಿ ದಾಖಲಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.