ದಾವಣಗೆರೆ: `ಹುಲಿಕೋಟೆ ಹುಲಿ~, `ಹುಲಿಕೋಟೆ ಚಾಣಕ್ಯ~, `ಕಬಡ್ಡಿ ಮಾಂತ್ರಿಕ~, `ಕಬಡ್ಡಿ ಸಾಮ್ರಾಟ್~ ಬಿರುದಾಂಕಿತರಾದ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ದಿ.ಆರ್. ವಸಂತಕುಮಾರ್ ಸ್ಮರಣಾರ್ಥ ನಗರದಲ್ಲಿ ದ್ರೋಣ ಕ್ರೀಡಾ ಸಮಿತಿ ವತಿಯಿಂದ ಆಯೋಜಿಸಿರುವ, ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿಗೆ ಅಕ್ಟೋಬರ್ 21ರಂದು ಚಾಲನೆ ದೊರೆಯಲಿದ್ದು, ಭಾರೀ ಸೆಣಸಾಟಕ್ಕೆ ಲೇಬರ್ ಕಾಲೊನಿಯ ನಾಟ್ಯಾಚಾರ್ಯ ಕುಲಕರ್ಣಿ ರಂಗಮಂದಿರ ಕಬಡ್ಡಿ ಅಂಕಣ ಸಿದ್ಧಗೊಂಡಿದೆ.
ಟೂರ್ನಿಗಾಗಿ ಕಬಡ್ಡಿ ಅಂಕಣ ನವವಧುವಿನಂತೆ ಸಿಂಗಾರಗೊಂಡಿದೆ. ಈ ಬಾರಿಯ ವಿಶೇಷ ಎಂದರೆ ಅಂಕಣದ ಸುತ್ತಲೂ ಸುಮಾರು ಎರಡು ಸಾವಿರ ಜನರು ಕುಳಿತು ವೀಕ್ಷಿಸುವಂತೆ ಕ್ರೀಡಾ ಗ್ಯಾಲರಿಯನ್ನು ನಿರ್ಮಾಣಗೊಳಿಸಲಾಗಿದೆ.
`ಟೂರ್ನಿಯಲ್ಲಿ ಬೆಂಗಳೂರಿನಿಂದ ವಿಜಯಾ, ಕೆಎಸ್ಪಿಸಿ, ಎಚ್ಎಎಲ್, ಬೆಲ್, ವಿಜಯನಗರ, ಬಿವೈಕೆ, ಶಕ್ತಿ, ಹೂಡಿ ಸ್ಪೋರ್ಟ್ಸ್ ಕ್ಲಬ್ ತಂಡಗಳು ಭಾಗವಹಿಸಲಿದ್ದು, ಅರ್ಜುನ ಪ್ರಶಸ್ತಿ ವಿಜೇತ ಹೊನ್ನಪ್ಪ ಕೇಂದ್ರ ಬಿಂದುವಾಗಲಿದ್ದಾರೆ~ ಎನ್ನುತ್ತಾರೆ ದ್ರೋಣ ಕ್ರೀಡಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್.
ಮೂರು ದಿನಗಳವರೆಗೆ ನಡೆಯುವ ಟೂರ್ನಿಯಲ್ಲಿ ಬಾಗಲಕೋಟೆ, ಚಿಂಚೋಳಿ, ಅಥಣಿ, ಧಾರವಾಡದ `ಸಾಯಿ~ ಹಾಗೂ ಬಳ್ಳಾರಿ ಜಿಲ್ಲೆಯ ಕುಡುತಿನಿ, ಕಂಪ್ಲಿ, ಚಿತ್ರದುರ್ಗ, ಹಿರಿಯೂರಿನ ತಂಡಗಳು ಸೆಣಸಲಿವೆ. ಶುಕ್ರವಾರ ಸಂಜೆ 6ಕ್ಕೆ ಟೂರ್ನಿಗೆ ಚಾಲನೆ ಸಿಗಲಿದೆ.