ಬೆಂಗಳೂರು: ನಗರದ ಕಸದ ಸಮಸ್ಯೆಯನ್ನು ತಗ್ಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಾಮೂಹಿಕ ಸ್ವಚ್ಛತಾ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು, ಮೇಯರ್ ಡಿ. ವೆಂಕಟೇಶಮೂರ್ತಿ ಮತ್ತು ಬಿಬಿಎಂಪಿ ಹಂಗಾಮಿ ಆಯುಕ್ತ ಸಿದ್ದಯ್ಯ ಅವರು ಸೋಮವಾರ ರಾತ್ರಿ ಗಾಂಧಿನಗರ, ಚಿಕ್ಕಪೇಟೆ ಮತ್ತು ಶಿವಾಜಿನಗರಗಳಲ್ಲಿ ಕಾರ್ಯಾಚರಣೆಯನ್ನು ಪರಿಶೀಲಿಸಿದರು.
ಮಾಧವನಗರದ ರಸ್ತೆಗಳಲ್ಲಿ ಹಲವಾರು ತಿಂಗಳಿನಿಂದ ಬಿದ್ದಿದ್ದ ಹಳೆಯ ಕಟ್ಟಡಗಳ ಮಣ್ಣು ಮತ್ತು ಕಸ ಸೇರಿದಂತೆ ರಸ್ತೆ ಬದಿಯಲ್ಲಿದ್ದ ಸುಮಾರು 15 ಟ್ರಕ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಈ ಭಾಗದಲ್ಲಿ ಹಾಳಾಗಿರುವ ಪಾದಚಾರಿ ಮಾರ್ಗಗಳನ್ನು ದುರಸ್ತಿ ಪಡಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೇಸ್ಕೋರ್ಸ್ ರಸ್ತೆ, ಕುಮಾರ ಕೃಪಾ ರಸ್ತೆ, ಜಯಮಹಲ್ ಮುಖ್ಯರಸ್ತೆ, ವಸಂತನಗರ ಮುಖ್ಯರಸ್ತೆ, ರಾಜಭವನ ರಸ್ತೆ, ಕ್ವೀನ್ಸ್ ರಸ್ತೆ, ಹಲಸೂರು ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳ ಬದಿಯಲ್ಲಿ ಬಿದ್ದಿದ್ದ ಕಸವನ್ನು ತೆರವುಗೊಳಿಸಲಾಯಿತು. ವಿದ್ಯುತ್ ಪರಿವರ್ತಕಗಳು ಇರುವ ಕಡೆಗಳಲ್ಲಿ ಹೆಚ್ಚು ತ್ಯಾಜ್ಯ ಬೀಳುತ್ತಿದ್ದು, ಇದನ್ನು ತಪ್ಪಿಸಲು ವಿದ್ಯುತ್ ಪರಿವರ್ತಕಗಳ ಸುತ್ತಲೂ ಗ್ರಿಲ್ ಅಳವಡಿಸಲು ಬೆಸ್ಕಾಂ ಜತೆಗೆ ಚರ್ಚಿಸಲು ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಬ್ಬಯ್ಯ ವೃತ್ತದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯವನ್ನು ನಿರ್ಮಿಸಲು ಪ್ರಸ್ತಾವ ಸಿದ್ಧಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಕಲಾಸಿಪಾಳ್ಯ ಬಸ್ ನಿಲ್ದಾಣದ ಸಮೀಪ ಸಂಗ್ರಹಗೊಂಡಿದ್ದ ಸುಮಾರು 25 ಟ್ರಕ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು. ಜೆ.ಸಿ.ರಸ್ತೆ, ಲಾಲ್ಬಾಗ್ ರಸ್ತೆ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಸ್ವಚ್ಛತಾಕಾರ್ಯ ಕೈಗೊಳ್ಳಲಾಯಿತು.