ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಬರ್ಟ್ ವಾದ್ರಾ ವಿರುದ್ಧ ಕೇಜ್ರಿವಾಲ್ ಆರೋಪ: ತನಿಖೆಗೆ ಅಣ್ಣಾ ಹಜಾರೆ ಆಗ್ರಹ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಮಾಡಿರುವ ಅವ್ಯವಹಾರ ಆರೋಪಗಳನ್ನು ಅಣ್ಣಾ ಹಜಾರೆ ಸಮರ್ಥಿಸಿಕೊಂಡಿದ್ದಾರೆ.

`ವಾದ್ರಾ ವಿರುದ್ಧ ಕೇಜ್ರಿವಾಲ್ ಮಾಡಿರುವ ಆರೋಪ ಸುಳ್ಳು ಎಂದಾದರೆ, ಕಾಂಗ್ರೆಸ್ ಯಾಕೆ ಪ್ರಕರಣವನ್ನು ತನಿಖೆಗೆ ಒಪ್ಪಿಸಬಾರದು~ ಎಂದು ಅವರು ಶನಿವಾರ ರಾಳೇಗಣ ಸಿದ್ಧಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಪ್ರಶ್ನಿಸಿದ್ದಾರೆ.

`ಒಂದು ವೇಳೆ ಆರೋಪ ಸುಳ್ಳಾದರೆ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಮಾನನಷ್ಟ ಮೊಕದ್ದಮೆ ಹೂಡಲಿ, ಆಗ ಸತ್ಯ ಹೊರಬರಲಿದೆ~ ಎಂದು ಸವಾಲು ಹಾಕಿದ್ದಾರೆ. 

`ವಾದ್ರಾ ಉತ್ತರಿಸಲಿ~:  `ಭೂ ಖರೀದಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಿದ್ದಾರೆ ಎಂದು ವಾದ್ರಾ ವಿರುದ್ಧ ಮಾಡಿದ ಆರೋಪಗಳಿಗೆ ನಾನು ಈಗಲೂ ಬದ್ಧ~ ಎಂದು ಅರವಿಂದ ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

`ನಾವು ತೀರ್ಪು ನೀಡುವ ಕೆಲಸ ಮಾಡುತ್ತಿಲ್ಲ. ಕೆಲವು ಅಂಶಗಳನ್ನು ಸಾರ್ವಜನಿಕರ ಮುಂದೆ ಇಟ್ಟಿದ್ದೇವೆ. ವಾದ್ರಾ ಇವುಗಳಿಗೆ ಏಕೆ ಉತ್ತರಿಸುತ್ತಿಲ್ಲ?~ ಎಂದು ಪ್ರಶ್ನಿಸಿದ್ದಾರೆ. 

`ಸೋನಿಯಾ ಅವರ ಅಳಿಯ ಎಂಬ ಒಂದೇ ಕಾರಣಕ್ಕಾಗಿ ವಾದ್ರಾ ವಿರುದ್ಧ ಆರೋಪ ಮಾಡುತ್ತಿಲ್ಲ. ರಾಜಕೀಯ ಲಾಭದ ಉದ್ದೇಶವೂ ಇದರ ಹಿಂದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು. 

ತನಿಖೆಗೆ ಕಾಂಗ್ರೆಸ್ ನಕಾರ: ವಿರೋಧಿಗಳ ಒತ್ತಡ ತಂತ್ರಗಳಿಗೆ ಜಗ್ಗದೆ ವಾದ್ರಾ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್, ತನಿಖೆಗೆ ನಿರಾಕರಿಸಿದೆ.

ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಅವರನ್ನು `ಬಿಜೆಪಿಯ ಬಿ ತಂಡ~ದ ಸದಸ್ಯರು ಎಂದು ಇದೇ ವೇಳೆ ಲೇವಡಿ ಮಾಡಿದರು.

ಕೀಳು ಮಟ್ಟದ ಪ್ರಚಾರಕ್ಕೋಸ್ಕರ ಕೇಜ್ರಿವಾಲ್ ಈ ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಪಟ್ನಾದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತರಾಟೆಗೆ ತೆಗೆದುಕೊಂಡಿದ್ದಾರೆ.     

ತನಿಖೆಗೆ ಬಿಜೆಪಿ ಒತ್ತಾಯ: ಈ ನಡುವೆ, ಜೈಪುರದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ರವಿಶಂಕರ ಪ್ರಸಾದ್, ವಾದ್ರಾ ವಿರುದ್ಧದ ಆರೋಪಗಳ ಬಗ್ಗೆ ತನಿಖೆಯಾಗಲಿ ಎಂದರು.

`ವಾದ್ರಾ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ~ ಎಂದು ಕಿರುತೆರೆ ನಟಿ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ದೆಹಲಿಯಲ್ಲಿ ಹೇಳಿದ್ದಾರೆ.

 ಆರೋಪಕ್ಕೆ ಪ್ರತಿಕ್ರಿಯೆ
ವಿವಾದದಲ್ಲಿ ಸಿಲುಕಿರುವ ರಾಬರ್ಟ್ ವಾದ್ರಾ ಕೊನೆಗೂ ಮೌನ ಮುರಿದಿದ್ದು, ನಕಾರಾತ್ಮಕ ಪರಿಸ್ಥಿತಿಯನ್ನು ನಿಭಾಯಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

ವಾದ್ರಾ ವಿವಾದದೊಂದಿಗೆ ತಳಕು ಹಾಕಿಕೊಂಡಿರುವ ಡಿಎಲ್‌ಎಫ್ ನಿರ್ಮಾಣ ಸಂಸ್ಥೆ, `ವಾದ್ರಾ ಅವರೊಂದಿಗೆ ಕೇವಲ ವಾಣಿಜ್ಯ ಸಂಬಂಧ ಹೊಂದಿದ್ದು ಎಲ್ಲ ವ್ಯವಹಾರ ಪಾರದರ್ಶಕವಾಗಿವೆ.

ಯಾವುದೇ ವ್ಯಕ್ತಿ, ಸರ್ಕಾರದ ಪ್ರಭಾವ ಬಳಸಿ ಯಾವುದೇ ಲಾಭ ಅಥವಾ ಭೂಮಿ ಪಡೆದಿಲ್ಲ~ ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT