ವಿಜಾಪುರ: ಕಾಂಗ್ರೆಸ್ ಸಂಸದರೊಬ್ಬರು ಯೋಗಗುರು ರಾಮದೇವ ಬಾಬಾ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಹಾಗೂ ಘಟನೆಯನ್ನು ಖಂಡಿಸಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನವರು ಭಾನುವಾರ ಇಲ್ಲಿ ಪ್ರತಿಭಟನೆ ನಡೆಸಿದರು.
ಅರುಣಾಚಲ ಪ್ರದೇಶದ ಪಾಶಿಘಾಟ್ದಲ್ಲಿ ನಡೆದ ಸಭೆಯಲ್ಲಿ ಯೋಗಗುರು ರಾಮದೇವ ಬಾಬಾ ಅವರು ಕಪ್ಪು ಹಣದ ಬಗ್ಗೆ ಜನತೆಗೆ ಮಾಹಿತಿ ನೀಡುತ್ತಿದ್ದರು. ಈ ಕುರಿತು ಪ್ರಧಾನಿಗಳಿಗೆ ಸಲ್ಲಿಸಲಿರುವ ಮನವಿ ಪತ್ರಕ್ಕೆ ಸಹಿ ಹಾಕುವಂತೆ ವಿನಂತಿಸುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಸಂಸದ ನಿನಾಂಗ್ ಅವರು ರಾಮದೇವ ಬಾಬಾ ಅವರನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಹರಿದ್ವಾರದ ಕಾರ್ಯಕರ್ತ ಹರಿಶರಣ, ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನ ಎಚ್.ಎಸ್. ತೊದಲಬಾಗಿ, ವಿಶ್ವನಾಥ ನರಳಿ, ಬಸವರಾಜ ಉಗ್ರಾಣ, ಆನಂದ ಅಕ್ಕಿ, ಶಿವು ಅಣೆಪ್ಪನವರ, ಬಿ.ಡಿ. ಪಾಟೀಲ (ಚಾಂದಕವಠೆ), ಡಾ.ರಾಜಶ್ರೀ ಅಕ್ಕಿ, ಸುನಂದಾ ಹೊನವಾಡ, ಭಾರತಿ ಭುಂಯ್ಯಾರ, ಶಿವಾನಂದ ಗಾಯಕವಾಡ, ಎಸ್.ಎ. ದೊಡ್ಡಪ್ಪಗೋಳ ಇತರರು ಪಾಲ್ಗೊಂಡಿದ್ದರು.