ರಾಯ್ ಬರೇಲಿ (ಪಿಟಿಐ): ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾದ ಅಮೇಥಿ ಹಾಗೂ ರಾಯ್ಬರೇಲಿ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿರುವ ಪ್ರಿಯಾಂಕಾ ವಾದ್ರಾ ತಮ್ಮ ಸಹೋದರ ರಾಹುಲ್ಗಾಗಿ `ಯಾವುದೇ ತೆರನಾದ ನೆರವು ನೀಡಲು ಸಿದ್ಧ~ ಎಂದು ಹೇಳಿದ್ದಾರೆ.
ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, `ಸದ್ಯಕ್ಕೆ ನಾನು ನಮ್ಮ ಸಂಸತ್ ಕ್ಷೇತ್ರಗಳ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದೇನೆ. ರಾಹುಲ್ ಇಚ್ಛಿಸಿ ದಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತೇನೆ~ ಎಂದು ತಿಳಿಸಿದರು. `ನಾನು ಈವರೆಗೆ ಏನೂ ನಿರ್ಧರಿಸಿಲ್ಲ. ನನ್ನ ಅಣ್ಣನ ಜತೆ ಚರ್ಚಿಸಿ, ಅವನಿಗೆ ಏನು ಬೇಕೋ ಹಾಗೆ ಮಾಡುವೆ~ ಎಂದೂ ಅವರು ಹೇಳಿದರು.
ಕಳೆದ ಎರಡು ವರ್ಷಗಳಿಂದ ಮುಚ್ಚಿರುವ ಖಾಸಗಿ ಕಾರ್ಖಾನೆಯ ನೌಕರರ ಜತೆ ಮಾತನಾಡಿದ ಪ್ರಿಯಾಂಕಾ, ಕಾರ್ಮಿಕರ ಸಮಸ್ಯೆ ಬಗೆಹರಿಸಲು ಯತ್ನ ನಡೆಯುತ್ತಿದೆ ಎಂದರು. ಇದು ಚುನಾವಣಾ ಸಮಯವಾದ್ದರಿಂದ ಭರವಸೆ ನೀಡಲು ಸಾಧ್ಯವಿಲ್ಲ.
ಆದರೆ, ಎರಡು ವರ್ಷಗಳಿಂದಲೂ ನಾವು ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದೇವೆ. ನೌಕರರು ಕಾರ್ಖಾನೆ ತೆರೆಯುವಂತೆ ಒತ್ತಾಯಿಸುತ್ತಿದ್ದಾರೆ. ಯಾರಾದರೂ ಉದ್ಯಮಿಗಳು ಬಂದು ಹೊಸ ಕಾರ್ಖಾನೆ ತೆರೆಯಬೇಕಿದೆ ಎಂದೂ ಆಕೆ ನುಡಿದರು.