ನವದೆಹಲಿ (ಪಿಟಿಐ): ಹಕ್ಕಿನ ಷೇರುಗಳ ಮೂಲಕ ರೂ. 5,000 ಕೋಟಿಗಳನ್ನು ಮಾರ್ಚ್ ಅಂತ್ಯದ ಹೊತ್ತಿಗೆ ಸಂಗ್ರಹಿಸಸಲಾಗುವುದು ಎಂದು ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ತಿಳಿಸಿದೆ.
`ಹಕ್ಕಿನ ಷೇರು~ಗಳ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಇದುವರೆಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿರದಿದ್ದರೂ, ರೂ. 5000 ಕೋಟಿಗಳ ಬಂಡವಾಳ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಹೊತ್ತಿಗೆ ಬ್ಯಾಂಕ್ನ ಶೇ 8ರಷ್ಟು ಬಂಡವಾಳ ಅಗತ್ಯ ಪೂರೈಸಲಿದೆ ಎಂದು `ಎಸ್ಬಿಐ~ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿಯಾಗಿರುವ ದೀವಾಕರ್ ಗುಪ್ತಾ ಅವರು ಸುದ್ದಿಸಂಸ್ಥೆಗೆ ಹೇಳಿದ್ದಾರೆ.
`ಹಕ್ಕಿನ ಷೇರು~ ಬಹುಶಃ 60:40ರ ಅನುಪಾತದಲ್ಲಿ ಇರಲಿದೆ. ಕೇಂದ್ರ ಸರ್ಕಾರವು ರೂ. 3,000 ಕೋಟಿ ತುಂಬಿ ಕೊಡಲಿದೆ. ಉಳಿದ ರೂ. 2,000 ಕೋಟಿಗಳು ಸಾಮಾನ್ಯ ಹೂಡಿಕೆದಾರರಿಂದ ಸಂಗ್ರಹಗೊಳ್ಳಲಿದೆ. ಕೇಂದ್ರ ಸರ್ಕಾರವು ಬ್ಯಾಂಕ್ನಲ್ಲಿ ಶೇ 59ರಷ್ಟು ಪಾಲು ಬಂಡವಾಳ ಹೊಂದಿದೆ. ಮುಂದಿನ 2ರಿಂದ 3 ವರ್ಷಗಳಲ್ಲಿ ವಹಿವಾಟು ವಿಸ್ತರಣೆಗೆ ಬ್ಯಾಂಕ್ಗೆ ರೂ. 20,000 ಕೋಟಿಗಳ ಅಗತ್ಯ ಇದೆ. ಮೊದಲ ಹಂತದಲ್ಲಿ ರೂ. 5,000 ಕೋಟಿಗಳನ್ನು ಸಂಗ್ರಹಿಸಿದರೆ ಅದರಿಂದ ಬಂಡವಾಳ ಅಗತ್ಯ ಈಡೇರಿಸಲು ಸಾಧ್ಯವಾಗಲಿದೆ.ಸಂಪತ್ತು ನಿರ್ವಹಣೆ ಮತ್ತು ಹಣಕಾಸು ಸಾಮರ್ಥ್ಯ ಕುಸಿಯುತ್ತಿರುವುದರಿಂದ ಮೌಲ್ಯಮಾಪನಾ ಸಂಸ್ಥೆ `ಮೂಡಿಸ್~, ಎಸ್ಬಿಐನ ಸಾಲ ನೀಡಿಕೆ ಸಾಮರ್ಥ್ಯವನ್ನು ಕಳೆದ ವಾರ `ಡಿ+~ ಗೆ ಇಳಿಸಿತ್ತು.
ಮೊದಲ ತ್ರೈಮಾಸಿಕದ ಹೊತ್ತಿಗೆ ಬ್ಯಾಂಕ್ನ ಬಂಡವಾಳ ಅಗತ್ಯದ ಮಟ್ಟವು (ಟಿಯರ್ 1) ಶೇ 8ರ ಬದಲಿಗೆ ಶೇ 7.6ಕ್ಕೆ ಇಳಿದಿತ್ತು. ಟಿಯರ್ -1 ಮತ್ತು ಟಿಯರ್-2 ಸೇರಿದಂತೆ ಒಟ್ಟಾರೆ ಬ್ಯಾಂಕ್ನ ಬಂಡವಾಳ ಅಗತ್ಯ ಅನುಪಾತವು ಈ ವರ್ಷದ ಜೂನ್ ತಿಂಗಳ ಅಂತ್ಯಕ್ಕೆ ಶೇ 11.6ರಷ್ಟಿತ್ತು. ವಸೂಲಾಗದ ಸಾಲದ ಪ್ರಮಾಣವು ಮೂರು ವರ್ಷಗಳ ಹಿಂದಿನ ಗರಿಷ್ಠ ಮಟ್ಟಕ್ಕೆ (ಶೇ 3.52) ಇಳಿದಿತ್ತು.
ಸಾಲ: ಪ್ರಣವ್ ಅಭಯ
ಟಬ್ರಿಜ್/ಇರಾನ್ (ಪಿಟಿಐ): ಭಾರತೀಯ ಸ್ಟೇಟ್ ಬ್ಯಾಂಕ್ಗೆ (ಎಸ್ಬಿಐ) ಶೇ 8ರಷ್ಟು ಅಗತ್ಯ ಬಂಡವಾಳದ ಅನುಪಾತ (ಸಿಎಆರ್) ಸಾಧಿಸಲು ಬೇಕಿರುವ ನೆರವು ನೀಡುವುದಾಗಿ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
`ಜಿ-20~ ಹಣಕಾಸು ಸಚಿವರ ಸಭೆಯಲ್ಲಿ ಭಾಗವಹಿಸಿ, ಪ್ಯಾರಿಸ್ನಿಂದ ನವದೆಹಲಿಗೆ ಮರುಳುತ್ತಿದ್ದ ವೇಳೆ ಟಬ್ರಿಜ್ನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಅಗತ್ಯ ಇರುವ ಬಂಡವಾಳ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
`ಎಸ್ಬಿಐ~ಗೆ ರೂ. 12 ಸಾವಿರ ಕೋಟಿ ನೆರವು ನೀಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ `ಸಾಲದ ಅಗತ್ಯಕ್ಕೆ ತಕ್ಕಂತೆ ನೆರವು ನೀಡಲಾಗುವುದು. `ಎಸ್ಬಿಐ~ಗೆ ಬೇಕಿರುವ ಹೆಚ್ಚುವರಿ ನೆರವು ನೀಡುತ್ತೇವೆ ಎಂದರು. ಈ ಮೊದಲು ಸರ್ಕಾರ `ಎಸ್ಬಿಐ~ಗೆ ರೂ. 3 ರಿಂದ ರೂ. 4 ಸಾವಿರ ಕೋಟಿಗಳಷ್ಟು ಹಣಕಾಸಿನ ನೆರವು ನೀಡುವುದಾಗಿ ಹಣಕಾಸು ಸೇವೆಗಳ ಕಾರ್ಯದರ್ಶಿ ಡಿ.ಕೆ ಮಿತ್ತಲ್ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.