ಬೆಂಗಳೂರು: ನಗರದ ರಾಜಾಜಿನಗರ, ಮಲ್ಲೆೀಶ್ವರ ಹಾಗೂ ಗಾಂಧಿನಗರ ಸೇರಿದಂತೆ ಬೆಂಗಳೂರು ಪಶ್ಚಿಮ ಭಾಗದಿಂದ ಪೂರ್ವ ಭಾಗಕ್ಕೆ ತೆರಳುವ ಜನರ ಅನುಕೂಲಕ್ಕಾಗಿ ಬಿಬಿಎಂಪಿ ಸಹಯೋಗದೊಂದಿಗೆ 5.62 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್ ಇತ್ತೀಚೆಗೆ ಚಾಲನೆ ನೀಡಿದರು.
ಅತ್ಯಾಧುನಿಕ ಪುಂಗ್ ಟೆಕ್ನಿಕ್ ತಾಂತ್ರಿಕತೆ ಅಳವಡಿಸಿ ಕೈಗೊಳ್ಳುತ್ತಿರುವ ಈ ರೈಲ್ವೆ ಸುರಂಗಮಾರ್ಗ ಕಾಮಗಾರಿಗೆ ಶೇಷಾದ್ರಿಪುರದ ಲಿಂಕ್ ರಸ್ತೆಗೆ ಸಂಪರ್ಕಿಸುವ ಶ್ರೀರಾಮಪುರದ ರೈಲ್ವೆ ಕ್ರಾಸಿಂಗ್ ಬಳಿ ಚಾಲನೆ ನೀಡಿ ಮಾತನಾಡಿದ ಅವರು, `ಓಕಳಿಪುರಂ ರೈಲ್ವೆ ಕಾರಿಡಾರ್ನ್ನು ಸುಮಾರು 105 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ~ ಎಂದರು.
`ಶೇಷಾದ್ರಿಪುರದ ಸ್ವಾತಿ ಹೋಟೆಲ್ ಬಳಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಸ್ಥಳ ಪರಿಶೀಲನೆ ಮಾಡಿ ಚಾಲನೆ ನೀಡಲಾಗುವುದು~ ಎಂದು ಭರವಸೆ ನೀಡಿದರು.
ಶಾಸಕ ದಿನೇಶ್ ಗುಂಡೂರಾವ್, `ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಚಾಲನೆ ನೀಡಿದ್ದು ಶ್ಲಾಘನೀಯ ಕಾರ್ಯ. ಪಕ್ಷ ಭೇದ ಮರೆತು ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರೊಂದಿಗೆ ಕೈಜೋಡಿಸಿದ್ದೇನೆ~ ಎಂದು ಹೇಳಿದರು.
ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹಾಗೂ ಬಿಬಿಎಂಪಿ ಸದಸ್ಯರು ಉಪಸ್ಥಿತರಿದ್ದರು.