ಗಂಗಾವತಿ: ಬಿತ್ತನೆಗೆ ನಕಲಿ ಬತ್ತದ ಬೀಜ ನೀಡಿದ್ದನ್ನು ಪ್ರಶ್ನಿಸಿದ ತಾಲ್ಲೂಕಿನ ಉಳೇನೂರು ಗ್ರಾಮದ ರೈತರನ್ನೇ ಗಂಗಾವತಿಯ ನಗರಠಾಣೆಯ ಪೊಲೀಸರು ಕಛೇರಿಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿದ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ.
ನಕಲಿ ಅಥವಾ ಕಳಪೆ ಬೀಜ ನೀಡಿದ್ದನ್ನು ವಿರೋಧಿಸಿದ ಉಳೇನೂರಿನ ರೈತರು ಶುಕ್ರವಾರ ನಗರಕ್ಕೆ ಆಗಮಿಸಿ ಪರಿಹಾರ ನೀಡಬೇಕು, ಇಲ್ಲವೇ ಕಂಪನಿಯ ಮಾಲೀಕರನ್ನು ಕರೆಯಿಸುವಂತೆ ಒತ್ತಾಯಿಸಿ ಮಲ್ಲಿಕಾರ್ಜುನ ಎಂಟರ್ಪ್ರೈಜ್ನ ರೇಣುಕಾ ಸೀಡ್ಸ್ ಮುಂದೆ ಕುಳಿತರು.
ರೈತರು ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೇಣುಕಾ ಸೀಡ್ಸ್ನ ಶಿವನಗೌಡ ಎಂಬ ಬೀಜ ವಿತರಕ, ಪೊಲೀಸರಿಗೆ ದೂರು ನೀಡಿದರು. ಈ ಹಿನ್ನೆಲೆ ಪೊಲೀಸರು ರೈತರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು ಎನ್ನಲಾಗಿದೆ.
ಕರೆದೊಯ್ಯವ ಸಂದರ್ಭದಲ್ಲಿ ಪೊಲೀಸರು ರೈತ ಒಬ್ಬರ ಕೊಳ್ಳುಪಟ್ಟಿ ಹಿಡಿದು ಕರೆದೊಯ್ದರು ಎಂದು ಪಾಡಪ್ಪ ಪೂಜಾರಿ ಎಂಬುವವರು ದೂರಿದ್ದಾರೆ.
ರೈತರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ವಿಷಯದ ಬಗ್ಗೆ ಸಮಗ್ರ ವಿಚಾರಣೆ ನಡೆಸಿದರು.
ಕಳಪೆ ಬೀಜದ ಆರೋಪ: `ಮೂರು ತಿಂಗಳಲ್ಲಿ ಕೊಯ್ಲಿಗೆ ಬರುವ ಉತ್ತಮ ಗುಣಮಟ್ಟದ ಬತ್ತದ ಬೀಜ ನೀಡುವಂತೆ ಕೋರಲಾಗಿತ್ತು.
ಆದರೆ ಮಾಲೀಕ ಕಾವೇರಿ ಸೋನಾ ಎಂದು ಬೇರೆ ಬೀಜ ನೀಡಿದ್ದಾರೆ. ಎಕರೆಗೆ 45-50 ಚೀಲ ಬತ್ತದ ಇಳುವರಿ ಬರಬೇಕಿತ್ತು. ಆದರೆ 15-18 ಚೀಲ ಮಾತ್ರ ಬಂದಿದೆ. ಇದರಿಂದಾಗಿ ಉಳೇನೂರು ಭಾಗದ ಸುಮಾರು 400ಕ್ಕೂ ಹೆಚ್ಚು ಎಕರೆಯಲ್ಲಿ ಈ ಬೀಜ ನಾಟಿ ಮಾಡಿದ ರೈತರಿಗೆ ಬೆಳೆ ನಷ್ಟವಾಗಿದೆ. ಪರಿಹಾರ ನೀಡುವಂತೆ ಕೇಳಿದ್ದು ತಪ್ಪಾ?~ ಎಂದು ಗಿಡಪ್ಪ ಬಡಗಿ, ಕರಿವೀರನಗೌಡ ಪ್ರಶ್ನಿಸಿದರು,
ನೀರಿನ ಸಮಸ್ಯೆ: `ರೈತರು ಕೇಳಿದ ಬೀಜವನ್ನೆ ನೀಡಲಾಗಿದೆ. ಆದರೆ ನಿಗದಿತ ಅವಧಿಗಿಂತ ವಿಳಂಬವಾಗಿ ಪ್ಲಾಂಟೆಶನ್ ಮಾಡಲಾಗಿದೆ. ಹೀಗಾಗಿ ಕೊನೆ ಘಳಿಗೆಯಲ್ಲಿ ಕಾಲುವೆಯ ನೀರು ಸ್ಥಗಿತಗೊಳಿಸಿದ್ದರಿಂದ ಬೆಳೆ ಬಂದಿಲ್ಲ~ ಎಂದು ಬೀಜ ವಿತರಕ ಶಿವನಗೌಡ ಹೇಳಿದರು.
`ಬೇಕಿದ್ದರೆ ಅದೇ ಪ್ರದೇಶದಲ್ಲಿ ತಾವು ವಿತರಿಸಿದ ನಾಗಾರ್ಜುನ ಬ್ರಾಂಡಿನ ಸೋನಾ-ಕೆ ಬೀಜ ಬಿತ್ತಿ ಉತ್ತಮ ಬೆಳೆ ತೆಗೆದ ರೈತರು ಇದ್ದಾರೆ. ಬೇಕಿದ್ದರೆ ಹೋಗಿ ವಿಚಾರಿಸಿ~ ಎಂದು ಬೀಜ ವಿತರಕ ಕೃಷಿ ಅಧಿಕಾರಿ ಎಲ್. ನಾಯಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.