ಬೆಂಗಳೂರು: ಜಾಲಹಳ್ಳಿ ಸಮೀಪದ ಲೊಟ್ಟಗೊಲ್ಲಹಳ್ಳಿ ಬಳಿ ಭಾನುವಾರ ಮಣಿಕಂಠ (25) ಎಂಬುವರು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೀಣ್ಯ ನಿವಾಸಿಯಾದ ಮಣಿಕಂಠ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಸ್ಥಳೀಯರು ಕರೆ ಮಾಡಿ ರೈಲು ಹಳಿ ಮೇಲೆ ಶವ ಬಿದ್ದಿರುವುದಾಗಿ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಸಿಬ್ಬಂದಿ ಮೃತರ ಜೇಬಿನಲ್ಲಿದ್ದ ಮೊಬೈಲ್ ಮುಖಾಂತರ ಪರಿಚಿತರನ್ನು ಸಂಪರ್ಕಿಸಿದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ ಎಂದು ಯಶವಂತಪುರ ರೈಲ್ವೆ ಪೊಲೀಸರು ಹೇಳಿದ್ದಾರೆ.
ಮಣಿಕಂಠ ಅವರು ಮೊದಲು ಲಿಂಗರಾಜಪುರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅವರು, ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ಭಾನುವಾರ ನಸುಕಿನ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.