ನೆಲಮಂಗಲ: ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೈಹಿಕ ಮತ್ತು ಸಾಮಾಜಿಕ ಅವಶ್ಯಕತೆಗಳ ಬಗ್ಗೆ ಅರಿವು ಮೂಡಿಸುವುದು, ಪ್ರಪಂಚದೆಲ್ಲೆಡೆ ಸ್ನೇಹ ಸಂಬಂಧ ಮತ್ತು ಸೇವೆಗಳ ಚೌಕಟ್ಟಿನಲ್ಲಿ ಜನರ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸಲು ಉತ್ತೇಜಿಸುವುದು ರೋಟರ್ಯಾಕ್ಟ್ನ ಉದ್ದೇಶವಾಗಿದೆ ಎಂದು ರೋಟರಿ ಜಿಲ್ಲಾ ಅಧ್ಯಕ್ಷ ಎಂ.ಪ್ರಭುದೇವ್ ಹೇಳಿದರು.
ಸ್ಥಳೀಯ ರೋಟರಿ ಸಂಸ್ಥೆಯು ಸೇಂಟ್ ಆನ್ಸ್ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನೂತನ ರೋಟರ್ಯಾಕ್ಟ್ ಘಟಕ ಉದ್ಘಾಟನೆಯ ಸಮಾರಂಭದಲ್ಲಿ, ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಇ.ಟಿ.ಕೇರ್ ರಾಜು, `ಪ್ರಪಂಚದಲ್ಲಿ ಶಾಂತಿ ಮತ್ತು ಪರಸ್ಪರ ಹೊಂದಾಣಿಕೆ ಮೂಡಿಸುವ ಕಾರ್ಯಗಳನ್ನು ರೋಟರ್ಯಾಕ್ಟ್ ಮಾಡುತ್ತಿದೆ~ ಎಂದರು.
ಶಾಲೆಯ ಮುಖ್ಯಸ್ಥೆ ಡಾ.ಶಾಲೇಜ್ ಶಿಕೋರಾ, `ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದರ ಜತೆಗೆ ಸಮುದಾಯ ಸೇವೆಗೆ ಅವರನ್ನು ಸನ್ನದ್ಧಗೊಳಿಸಲಾಗುವುದು~ ಎಂದರು.
ರೋಟರ್ಯಾಕ್ಟ್ನ ನೂತನ ಅಧ್ಯಕ್ಷ ಮಾಸ್ಟರ್ ಸಂಜಯ್, ಉಪಾಧ್ಯಕ್ಷೆ ಕುಮಾರಿ ಸ್ನೇಹ ಕಾರ್ಯದರ್ಶಿ ಅಕ್ಷತಾ ಮಾತನಾಡಿದರು.
ರೋಟರಿ ಕಾರ್ಯದರ್ಶಿ ಮುನಿರಾಜು ಸ್ವಾಗತಿಸಿ, ನಿರ್ದೇಶಕ ನವೀನಕುಮಾರ್ ವಂದಿಸಿದರು. ಸಿಸ್ಟರ್ ಶೋಭಾ ನಿರೂಪಿಸಿದರು. ನಿರ್ದೇಶಕರಾದ ಮಂಜುನಾಥ್, ನಾಗರಾಜು, ಗಂಗರಾಜು, ರಾಮಚಂದ್ರ ವೇದಿಕೆಯಲ್ಲಿಉಪಸ್ಥಿತರಿದ್ದರು.