ಕೊಲಂಬೊ (ಪಿಟಿಐ): ಮೋಸದಾಟದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮೂವರು ಅಂಪೈರ್ಗಳನ್ನು ಶ್ರೀಲಂಕಾ ಕ್ರಿಕೆಟ್ನ ಅಂಪೈರ್ಗಳ ಸಮಿತಿ ಅಮಾನತುಗೊಳಿಸಿದೆ. `ಆರೋಪದ ಬಗ್ಗೆ ತನಿಖೆ ಕೊನೆಗೊಳ್ಳುವವರೆಗೆ ಮೂವರನ್ನು ಅಮಾನತು ಮಾಡಲು ನಿರ್ಧರಿಸಿದ್ದೇವೆ~ ಎಂದು ಅಂಪೈರ್ ಸಮಿತಿ ಮುಖ್ಯಸ್ಥ ಎಆರ್ಎಂ ಅರೂಸ್ ಹೇಳಿದ್ದಾರೆ.
ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಟ್ಟು ಆರು ಅಂಪೈರ್ಗಳು ಮೋಸದಾಟದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದು ಇಂಡಿಯಾ ಟಿ.ವಿ. ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿತ್ತು. ಈ ಆರೂ ಅಂಪೈರ್ಗಳನ್ನು ಐಸಿಸಿ ಬುಧವಾರ ಅಮಾನತು ಮಾಡಿತ್ತು. ಅದರ ಬೆನ್ನಲ್ಲೇ ಶ್ರೀಲಂಕಾ ಅಂಪೈರ್ಗಳ ಸಮಿತಿಯ ನಿರ್ಧಾರ ಹೊರಬಿದ್ದಿದೆ.
ಗಾಮಿನಿ ದಿಸ್ಸಾನಾಯಕೆ, ಮೌರಿಸ್ ವಿನ್ಸ್ಟನ್ ಮತ್ತು ಸಾಗರ ಗಳಾಗೆ ಅವರು ಆರೋಪ ಎದುರಿಸುತ್ತಿರುವ ಅಂಪೈರ್ಗಳು. ಇದರಲ್ಲಿ ಇಬ್ಬರು ಗುರುವಾರ ಸಮಿತಿಯ ಮುಂದೆ ಹಾಜರಾಗಿ ತಮ್ಮ ಮೇಲಿರುವ ಆರೋಪವನ್ನು ನಿರಾಕರಿಸಿದರು ಎಂದು ಅರೂಸ್ ತಿಳಿಸಿದ್ದಾರೆ.