ನವದೆಹಲಿ (ಪಿಟಿಐ): ‘ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಕ್ಷ್ಮಣರೇಖೆ ದಾಟುತ್ತಿದ್ದಾರೆ’ ಎಂದು ಬಿಜೆಪಿ ಶನಿವಾರ ಆಕ್ಷೇಪಿಸಿದೆ.
‘ಮೋದಿ ಅವರನ್ನು ಟೀಕಿಸಲು ‘ದೀದಿ’ ಕೆಟ್ಟ ವಿಶೇಷಗಳನ್ನು ಬಳಸುತ್ತಿದ್ದಾರೆ. ಅವರ ಬದಲಾವಣೆ ಮಂತ್ರ ಅರಾಜಕತೆಯನ್ನು ಸೃಷ್ಟಿಮಾಡಿದೆಯೇ ಹೊರತು ಅಭಿವೃದ್ಧಿ ಅಥವಾ ಉತ್ತಮ ಆಡಳಿತವನ್ನಲ್ಲ’ ಎಂದು ಬಿಜೆಪಿ ಹಿರಿಯ ನಾಯಕ ಅರುಣ್್ ಜೇಟ್ಲಿ ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ.
ರಾಜ್ಯವನ್ನು ಬದಲಾವಣೆಯತ್ತ ಕೊಂಡೊಯ್ಯುವ ಭರವಸೆ ಮೇಲೆ ಮಮತಾ ಅವರು 34 ವರ್ಷಗಳ ಎಡರಂಗದ ಆಡಳಿತವನ್ನು ಧೂಳೀಪಟ ಮಾಡಿ ಅಧಿಕಾರ ಗದ್ದುಗೆ ಏರಿದ್ದರು.
ಜೇಟ್ಲಿ ಹೇಳಿದ್ದೇನು...?: ‘ಪಶ್ಚಿಮಬಂಗಾಳದಲ್ಲಿ ಮಮತಾ ಹಾಗೂ ಅವರ ಪಕ್ಷಕ್ಕೆ ಸಾಂಪ್ರದಾಯಿಕ ಎದುರಾಳಿಗಳೆಂದರೆ ಎಡ ಪಕ್ಷಗಳು. ಆದರೂ ‘ದೀದಿ’ ಬಿಜೆಪಿ ಮೇಲೆ ಹರಿಹಾಯುವುದು ಏಕೆ? ಮಮತಾ ಬುದ್ಧಿವಂತ ರಾಜಕಾರಣಿ. ಆದರೆ, ರಾಜ್ಯದಲ್ಲಿ ಅಭಿವೃದ್ಧಿ ಕೊರತೆ ಕಾರಣ ಮಧ್ಯಮವರ್ಗದ ಮತದಾರರು ಅವರಿಂದ ದೂರವಾಗಿದ್ದಾರೆ. ಅವರಿಗೆ ಈಗ ಬೇಕಾಗಿರುವುದು ಮೋದಿ’ ಎಂದು ಹೇಳಿದ್ದಾರೆ.
‘ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಮಾತ್ರವಲ್ಲ, “ಗೂಂಡಾಗಳು’’ ಎಡ ಪಕ್ಷದಿಂದ ಮಮತಾ ಕಡೆ ವಾಲಿದ್ದಾರೆ. ಇದರ ಜತೆಗೆ ಮಮತಾ ಅವರಿಗೆ ಬಾಂಗ್ಲಾದೇಶದ ಅಕ್ರಮ ವಲಸಿಗರ ಬೆಂಬಲ ಇದೆ’ ಎಂದಿದ್ದಾರೆ.
‘ಈ ಎಲ್ಲ ಕಾರಣಗಳಿಗಾಗಿ ಮಮತಾ ಅಕ್ರಮ ವಲಸಿಗರನ್ನು ಬೆಂಬಲಿಸಬೇಕಾಗಿದೆ ಮತ್ತು ಮೋದಿ ಅವರನ್ನು ನಿಂದಿಸಬೇಕಾಗಿದೆ. ಇಂಥ ನಡವಳಿಕೆ ಮಿತಿ ಮೀರಿದಂತೆಲ್ಲ ‘ದೀದಿ’ ತಮ್ಮನ್ನು ಅಧಿಕಾರಕ್ಕೆ ತಂದು ಕೂರಿಸಿದ ಪ್ರಮುಖ ವರ್ಗದವರಿಂದ ದೂರವಾಗುತ್ತಾ ಹೋಗುತ್ತಾರೆ. ಅಕ್ರಮವಾಗಿ ಆಮದು ಮಾಡಿಕೊಂಡ ಮತಗಳನ್ನು ಅವರು ಎಷ್ಟು ಕಾಲ ನೆಚ್ಚಿಕೊಂಡಿರಲು ಸಾಧ್ಯ’ ಎಂದು ಜೇಟ್ಲಿ ಕೇಳಿದ್ದಾರೆ.