ಹೊಳೆವ ಕಣ್ಣು, ತುಂಟ ನಗು, ದುಂಡು ಮುಖದ ಚೆಲುವೆ ಲತಾ ಹಾಸನದವರು. ದ್ವಿತೀಯ ಪಿಯುಸಿ ಓದಿದ್ದಾರೆ. ‘ಚಂದನ’ದಲ್ಲಿ ಪ್ರಸಾರವಾದ ‘ದಿಢೀರ್ ದುಡ್ಡು’ ಅವರ ಮೊದಲ ಧಾರಾವಾಹಿ. ‘ಸಿಂಧೂರ’, ‘ಗಾಜಿನಗೊಂಬೆ’ ಧಾರಾವಾಹಿಗಳಲ್ಲಿ ನಟಿಸಿರುವ ಅವರು ಇದೀಗ ‘ಅಮ್ಮ ನಿನಗಾಗಿ’ ಧಾರಾವಾಹಿಯಲ್ಲಿದ್ದಾರೆ. ಸಿನಿಮಾ ನಂಟನ್ನೂ ಹೊಂದಿರುವ ಅವರು ನಟಿಸಿದ ಮೊದಲ ಸಿನಿಮಾ ‘ಆದಿ’.
‘ಉಗ್ರ ನರಸಿಂಹ’, ‘ಸಮರ ಸಿಂಹ ನಾಯಕ’, ‘ದುನಿಯಾ’, ‘ಶ್ರೀ’, ‘ಪರೋಡಿ’ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡ ಲತಾಗೆ ನಾಯಕಿ ಆಗಬೇಕೆಂಬ ಹಂಬಲವೇನೂ ಇರಲಿಲ್ಲವಂತೆ. ಅದಕ್ಕೆ ಕಾರಣ ಸಿನಿಮಾ ಲೋಕದಲ್ಲಿ ಗ್ಲಾಮರ್ ಅವಶ್ಯಕತೆ ಇರುವುದು ಎಂಬುದು ಅವರ ವಿವರಣೆ. ‘ಮಂಡ್ಯ’ ಚಿತ್ರದಲ್ಲಿ ದರ್ಶನ್ ತಂಗಿ ಪಾತ್ರ ಮಾಡಿದ್ದನ್ನೂ ಖುಷಿಯಿಂದ ಹೇಳಿಕೊಳ್ಳುವ ಅವರು ಮೊದಲ ಸಲ ದರ್ಶನ್ ನೋಡಿದಾಗಿನ ಸಂತೋಷವನ್ನು ಕಣ್ಣಿನ ತುಂಬಾ ವ್ಯಕ್ತಪಡಿಸುತ್ತಾ ನಗುತ್ತಾರೆ.
ಮದುವೆಯಾಗಿದ್ದು ಅಭಿನಯ ಮುಂದುವರಿಸಿರುವ ಲತಾ, ಸ್ಕೋಪ್ ಇರುವ ಪ್ರಮುಖ ಪಾತ್ರಗಳಲ್ಲಿ ಮಾತ್ರ ನಟಿಸುವ ಆಸೆ ವ್ಯಕ್ತಪಡಿಸುತ್ತಾರೆ. ಹಿರಿಯ ನಟಿ ಕಲ್ಪನಾ ಮಾಡಿದಂಥ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಅವರದು. ಪಾಶ್ಚಾತ್ಯ ನೃತ್ಯ ಬಲ್ಲ ಲತಾರಿಗೆ ಕಿರುತೆರೆ ನೀಡಿರುವ ಕಂಫರ್ಟ್ ಬದುಕು ಇಷ್ಟವಂತೆ.
ಉದ್ಯಮದಲ್ಲಿ ಯಾವುದೇ ಕೆಟ್ಟ ಅನುಭವ ಆಗಿಲ್ಲ ಎನ್ನುತ್ತಾ, ‘ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ತುಂಬಾ ಸೈಕಲ್ ಹೊಡೀತಿದ್ದೆ’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ ಲತಾ. ಖಳನಾಯಕಿ ಪಾತ್ರ ಇಷ್ಟಪಡುವ ನಟಿಯರ ಸಾಲಿಗೂ ಸೇರುವ ಅವರ ಪ್ರಕಾರ ‘ಕಾಮಿಡಿ ತುಂಬಾ ಕಷ್ಟ’.