ಮೃದಂಗ, ಖಂಜರಿ ಹಾಗೂ ಕೊನಕೋಲ್ ಮೂರು ಲಯವಾದ್ಯಗಳ ಹಿರಿಯ ಸಾಧಕರೇ ಬಿ.ಕೆ. ಚಂದ್ರಮೌಳಿ. ಹಿರಿಯ ಸಂಗೀತ ವಿದುಷಿ ರಾಜಮ್ಮ ಕೇಶವಮೂರ್ತಿ ಮತ್ತು ಬ.ಮ. ಕೇಶವಮೂರ್ತಿ ಅವರ ಹಿರಿಯ ಪುತ್ರರಾಗಿ ಜನಿಸಿದ ಚಂದ್ರಮೌಳಿ ಅವರಿಗೆ ಬಾಲ್ಯದಿಂದ ಲಯವಾದ್ಯಗಳ ಗೀಳು. ಸಿ.ಕೆ. ಅಯ್ಯೊಮಣಿ ಅಯ್ಯರ್ ಅವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಅವರು, ಕೆ.ಎಸ್. ಗೋಪಾಲರಾವ್ ಅವರಲ್ಲಿ ಮುಂದುವರೆಸಿ, ಪದ್ಮಶ್ರೀ ಪಾಲ್ಘಾಟ್ ರಘು ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿದರು.
ಕೇವಲ 12 ವರ್ಷದ ಕಿರಿಯರಾಗಿದ್ದಾಗಲೇ ಕಛೇರಿ ಮಾಡಲು ಪ್ರಾರಂಭಿಸಿದ ಚಂದ್ರಮೌಳಿ, ಎರಡು ತಲೆಮಾರಿನ ಕಲಾವಿದರುಗಳಿಗೆ ಯಶಸ್ವಿಯಾಗಿ ಪಕ್ಕವಾದ್ಯ ನುಡಿಸಿದ್ದಾರೆ. ಇಂದು ಅಪರೂಪವಾಗುತ್ತಿರುವ ಕೊನಕೋಲನ್ನು ಜನಪ್ರಿಯಗೊಳಿಸುವಲ್ಲಿ ತುಂಬು ಪ್ರಯತ್ನ ಮಾಡಿದ್ದಾರೆ. ಖಂಜರಿ, ಮೃದಂಗಗಳಲ್ಲೂ ಒಳ್ಳೆಯ ಅನುಭವ.
ಎಡಗೈ ವಾದಕರಾಗೇ ಯಶಸ್ವೀ. ಬೋಧಕರಾಗಿ ತಮ್ಮ ಶ್ರೀ ಮೂಕಾಂಬಿಕಾ ತಾಳವಾದ್ಯ ಸಂಗೀತ ಕಲಾಶಾಲೆಯ ಮೂಲಕ ನೂರಾರು ಜನಕ್ಕೆ ಶಿಕ್ಷಣ ನೀಡಿದ್ದಾರೆ. ಯಾವ ಕಲಾವಿದರ ಸನ್ಮಾನವಾಗಲೀ, ಮೆರವಣಿಗೆಯಾಗಲೀ ಮೊದಲಿಗೇ ಚಂದ್ರಮೌಳಿ ಹಾಜರಿರುತ್ತಾರೆ. ತ್ಯಾಗರಾಜ ಗಾನಸಭಾ, ಮಲ್ಲೇಶ್ವರಂ ಸಂಗೀತ ಸಭಾ, ಕರ್ನಾಟಕ ಗಾನಕಲಾ ಪರಿಷತ್, ಪುರಂದರದಾಸ ಆರಾಧನೋತ್ಸವ ಸಮಿತಿ ಮುಂತಾದ ಸಂಸ್ಥೆಗಳಲ್ಲಿ ನಿರಂತರ ಸೇವೆ.
ಮೈಸೂರಿನ ಜೆ.ಎ.ಎಸ್. ಸಂಗೀತ ಸಭಾದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ `ಸಂಗೀತ ವಿದ್ಯಾನಿಧಿ~ ಮತ್ತು ತ್ಯಾಗರಾಜ ಗಾನಸಭೆಯಿಂದ `ಕಲಾಭೂಷಣ; ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾಶ್ರೀ~ ಬಿರುದುಗಳಿಗೆ ಭಾಜನರಾಗಿದ್ದಾರೆ. ಕಂಚಿ ಕಾಮಕೋಟಿ ಪೀಠ ಮತ್ತು ಇಸ್ಕಾನ್ನ ಆಸ್ಥಾನ ವಿದ್ವಾನ್ ಗೌರವಕ್ಕೂ ಪಾತ್ರರು.
ಭಾನುವಾರ (5-2-12) ಅಭಿಮಾನಿ ಬಳಗದವರಿಂದ ವಿದ್ವಾನ್ ಬಿ.ಕೆ. ಚಂದ್ರಮೌಳಿ ಅವರಿಗೆ ಅಭಿನಂದನಾ ಸಮಾರಂಭ. ಅಧ್ಯಕ್ಷತೆ: ಸರ್.ಎಂ.ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ ಲಿ.ನ ಅಧ್ಯಕ್ಷರಾದ ಕೆ.ಎನ್. ವೆಂಕಟನಾರಾಯಣ. ಮುಖ್ಯ ಅತಿಥಿಗಳು: ವಿದ್ವಾನ್ ಟಿ.ಎ.ಎಸ್. ಮಣಿ ಮತ್ತು ವಿದ್ವಾನ್ ಭದ್ರಗಿರಿ ಸರ್ವೋತ್ತಮದಾಸರು. ಗಾಯನ: ಎಚ್. ಎನ್. ಮೀರಾ. ಪಿಟೀಲು - ಬಿ.ಎಸ್. ಮಧುಸೂದನ್ ಮೃದಂಗ- ಬಿ.ಸಿ.ಮಂಜುನಾಥ್, ತಬಲ- ಎಂ.ಎ. ಕೃಷ್ಣಮೂರ್ತಿ, ಖಂಜರಿ - ಶ್ರೀಧರ್ ಮತ್ತು ಘಟ - ಪುರುಷೋತ್ತಮ. ಬೆ: 10.30. ಸ್ಥಳ : ಬಾಲಮೋಹನ್ ವಿದ್ಯಾಮಂದಿರ 13ನೇ ಕ್ರಾಸ್, 1ನೇ `ಕೆ~ ಬ್ಲಾಕ್, ರಾಜಾಜಿನಗರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.